ಬಂಡೆಗೆ ಕಾರು ಡಿಕ್ಕಿ – ಕೊರೊನಾ ಭೀತಿಯಿಂದ ಊರಿಗೆ ಹೋಗ್ತಿದ್ದ ಮೂವರು ದುರ್ಮರಣ

ಬಾಗಲಕೋಟೆ: ಬಂಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಕೊಡಗಲಿಯಲ್ಲಿ ನಡೆದಿದೆ.

ಸುವರ್ಣ(40), ಬಸವಣ್ಣೆಪ್ಪ (70) ಹಾಗೂ ಸವಿತಾ (20) ಮೃತ ದುರ್ದೈವಿಗಳು. ಮೃತರು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಕಟಕಚಿಂಚೂಳಿ ಗ್ರಾಮದವರು ಎಂದು ತಿಳಿದುಬಂದಿದೆ.

ಕಾರಿನಲ್ಲಿ ಒಟ್ಟು ಆರು ಮಂದಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೀದರ್ ಜಿಲ್ಲೆಗೆ ಹೊರಟಿದ್ದರು. ಟ್ರಾಪಿಕ್ ಕಾರಣ ಇಳಕಲ್ ಮಾರ್ಗವಾಗಿ ಹೊರಟಿದ್ದರು. ಆದರೆ ಹಿರೇಕೊಡಗಲಿ ಬಳಿ ರಸ್ತೆ ತಿರುವು ಗೊತ್ತಾಗದೆ ಕಾರು ಕಲ್ಲು ಬಂಡೆಗೆ ಹೋಗಿ ಡಿಕ್ಕಿ ಹೊಡೆದಿದೆ.

ಅಪಘಾತ ರಭಸಕ್ಕೆ ಕಾರಿನಲ್ಲಿದ್ದ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇಳಕಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವನ್ನಪ್ಪಿದ್ದರೆ, ಇಳಕಲ್‍ನಿಂದ ಬಾಗಲಕೋಟೆ ಆಸ್ಪತ್ರೆಗೆ ಹೋಗುವ ವೇಳೆ ಮತ್ತೊಬ್ಬರು ಮೃತಪಟ್ಟಿದ್ದಾರೆ. ಇನ್ನೂ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *