ಯಶವಂತಪುರ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಕ್ಯಾಂಟರ್- ಚಾಲಕನಿಗೆ ಗಂಭೀರ ಗಾಯ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕ್ಯಾಂಟರ್ ಕೆಳಗೆ ಬಿದ್ದ ಘಟನೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ಮುಂದೆ ನಡೆದಿದೆ.

ಬೆಳಗಾವಿ ಯಿಂದ ಬೆಂಗಳೂರಿಗೆ ಬರುತ್ತಿದ್ದ ಕ್ಯಾಂಟರ್ ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ. ಇಂದು ಮುಂಜಾನೆ 7.15ಕ್ಕೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯವಾಗಿದೆ.  ಕ್ಯಾಂಟರ್‍ನಲ್ಲಿ ಕೋಳಿ ತುಂಬಿಕೊಂಡು ಬರಲಾಗುತ್ತಿತ್ತು.

ಸ್ಥಳಕ್ಕೆ ಯಶವಂತಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರನ್ನು ಜೆಸಿಬಿ ಮೂಲಕ ಮೇಲೆತ್ತಲಾಗಿದೆ. ಗಾಯಾಳು ಕ್ಯಾಂಟರ್ ಚಾಲಕನನ್ನು ಹತ್ತಿರದ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕ್ಯಾಂಟರ್ ನಲ್ಲಿ ಡ್ರೈವರ್ ಹಾಗೂ ಇಬ್ಬರು ಕ್ಲೀನರ್ ಗಳು ಸೇರಿ ಒಟ್ಟು ಮೂರು ಜನ ಇದ್ದರು. ವೇಗವಾಗಿ ಕ್ಯಾಂಟರ್ ಬಂದಿದ್ದು, ಮುಂದೆ ಟ್ರಾಫಿಕ್ ಜಾಮ್ ಇದೆ ಎಂದು ಚಾಲಕ ಬ್ರೇಕ್ ಹಾಕಲು ಹೋಗಿ ನಿಯಂತ್ರಣ ಸಿಗದೆ ಕ್ಯಾಂಟರ್ ಕೆಳಗೆ ಬಿತ್ತು. ಚಾಲಕನಿಗೆ ಗಾಯವಾಗಿದೆ, ಕ್ಲೀನರ್ ಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *