ನಮ್ಮ ತೀಟೆ ತೀರಿಸಿಕೊಳ್ಳಲು ನಿಖಿಲ್‍ರನ್ನು ಚುನಾವಣೆಗೆ ನಿಲ್ಲಿಸಿಲ್ಲ: ಸಿ.ಎಸ್.ಪುಟ್ಟರಾಜು

– ಲಜ್ಜೆಗೆಟ್ಟ ರಾಜಕಾರಣಿ ನಾನಲ್ಲ

ಮಂಡ್ಯ: ನಮ್ಮ ತೀಟೆ ತೀರಿಸಿಕೊಳ್ಳಲು ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ಕರೆತಂದು ನಿಲ್ಲಿಸಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಂತರ ಹೋರಾಟ ರೂಪಿಸಲು ನಿಖಿಲ್‍ರನ್ನ ಕರೆತರಲಾಗಿದೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ವೇದಿಕೆ ಮೇಲಿರುವ ಮುಖಂಡರನ್ನು ಸ್ವಾಗತಿಸಿದರು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನು ಭಾವಿ ಸಂಸದರು ಎಂದು ಸಂಬೋಧಿಸಿದರು.

ಹೋರಾಟದ ಶಕ್ತಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ರಕ್ತದಲ್ಲಿದೆ. ಹೀಗಾಗಿ ನಾವು ನಿಖಿಲ್ ಕುಮಾರಸ್ವಾಮಿ ಅವರನ್ನ ಕರೆತಂದು ಚುನಾವಣೆಗೆ ನಿಲ್ಲಿಸಿದ್ದೇವೆ. ನಾವೇನು ಗೋಲಿ ಆಟ ಆಡುತ್ತಿಲ್ಲ. ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಿಖಿಲ್ ಅವರು 23 ರಂದು ನಿಜವಾದ ಜಾಗ್ವಾರ್ ಆಗಿ ಹೊರ ಹೊಮ್ಮಲಿದ್ದಾರೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಗೌರವ, ಪ್ರೀತಿ ವಿಶ್ವಾಸ ಇಟ್ಟುಕೊಂಟಿದ್ದೇನೆ. ಅವರ ಬಗ್ಗೆ ಹಗುರವಾಗಿ ಮಾತನಾಡುವಂತಹ ಲಜ್ಜೆಗೆಟ್ಟ ರಾಜಕಾರಣಿ ನಾನಲ್ಲ. ತಪ್ಪು ಮಾಡಿದರೇ ಹೇಳಿ, ಸರಿ ಮಾಡಿಕೊಳ್ಳುತ್ತೇವೆ. ಸುಮ್ಮನೆ ಆರೋಪ ಮಾಡಬೇಡಿ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ದೊಡ್ಡ ಫಿಲಂ ಸ್ಟಾರ್ ಸೋಲಿಸಿ ನಾನು ಸಂಸದನಾದೆ. ಈ ಮಣ್ಣಿಂದ ನಿಖಿಲ್‍ಗೆ ಆಶೀರ್ವಾದ ಮಾಡಿ ಕಳುಹಿಸುತ್ತಿದ್ದೇವೆ. ಕುಮಾರಣ್ಣನ ರೀತಿ ಕೆಲಸ ಮಾಡಿಯೇ ಮಾಡುತ್ತಾರೆ. ಮೀರ್ ಸಾಧಕ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ತಡೆಯಲು ಸಾಧ್ಯವಿಲ್ಲ ಎಂದು ನಿಖಿಲ್ ವಿರುದ್ಧ ಕೆಲಸ ಮಾಡಿದವರನ್ನು ಮೀರ್ ಸಾಧಕ್‍ರಿಗೆ ಹೋಲಿಸಿದರು.

Comments

Leave a Reply

Your email address will not be published. Required fields are marked *