ಆಡಳಿತ ಪಕ್ಷದ ಹಣ ಬಲದ ನಡುವೆಯೂ ಸಮಾಧಾನದ ಫಲಿತಾಂಶ: ಬಿಎಸ್‍ವೈ

ಬೆಂಗಳೂರು: ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಆಡಳಿತ ಪಕ್ಷದ ಹಣ ಬಲದ ನಡುವೆಯೂ ಬಿಜೆಪಿಗೆ ಸಮಾಧಾನದ ಫಲಿತಾಂಶ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ವಿಚಾರಕ್ಕೆ ಬಿಎಸ್‍ವೈ ಮಾಧ್ಯಮದೊಂದಿಗೆ ಮಾತನಾಡಿ, ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ಲಬೇಕಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ಇರುವುದರಿಂದ ನಿರೀಕ್ಷಿತ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಆಡಳಿತ ಪಕ್ಷದ ಹಣ ಬಲದ ನಡುವೆಯೂ ನಮಗೆ ಸಮಾಧಾನ ಫಲಿತಾಂಶ ಸಿಕ್ಕಿದೆ. ಇದು ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭಾ ಚುನಾವಣಾ ವಿಚಾರವೇ ಬೇರೆಯಾಗಿದ್ದು, ನೂರಕ್ಕೆ ನೂರರಷ್ಟು ಲೋಕಸಭೆಯಲ್ಲಿ ನಾವೇ ಗೆಲ್ಲುತ್ತೇವೆ. ಒಟ್ಟು 28 ಸ್ಥಾನಗಳ ಪೈಕಿ 23 ರಲ್ಲಿ ನಾವು ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

29 ನಗರಸಭೆಗಳ ಪೈಕಿ ಬಿಜೆಪಿ 15, ಕಾಂಗ್ರೆಸ್ 9, ಹಾಗೂ ಜೆಡಿಎಸ್ 3 ಕಡೆ ಗೆದ್ದುಕೊಂಡಿದೆ. 53 ಪುರಸಭೆಯಲ್ಲಿ ಬಿಜೆಪಿಗೆ 11, ಕಾಂಗ್ರೆಸ್ 28, ಜೆಡಿಎಸ್ 8 ಕಡೆ ಗೆಲುವು ಪಡೆದಿದೆ. 23 ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿಗೆ 8, ಕಾಂಗ್ರೆಸ್‍ಗೆ 9 ಹಾಗೂ ಜೆಡಿಎಸ್‍ಗೆ 2 ಸ್ಥಾನ ಪಡೆದಿದೆ. ಮಹಾನಗರ ಪಾಲಿಕೆಯಲ್ಲಿ ಒಂದೇ ಒಂದು ಕಡೆ ಅಂದರೆ ಶಿವಮೊಗ್ಗದಲ್ಲಿ ಬಹುದೊಡ್ಡ ಅಂತರದಲ್ಲಿ ಬಿಜೆಪಿ ಬಹುಮತ ಪಡೆದಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *