ನನ್ ಮಗನಿಗೆ ಟಿಕೆಟ್ ಕೊಡಿ – ಕುಟುಂಬ ರಾಜಕಾರಣ ವಿರೋಧಿಸಿದವ್ರಿಂದಲೇ ಮತ್ತದೇ ಪಾಲಿಟಿಕ್ಸ್

ಬೆಂಗಳೂರು: ಕುಟುಂಬ ರಾಜಕಾರಣವನ್ನು ವಿರೋಧಿಸಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಿಗಿದ ನಾಯಕ ಇದೀಗ ಉಪಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡಿ ಎಂದು ಬಿಜೆಪಿ ನಾಯಕರ ಮುಂದೆ ಲಾಬಿ ಮಾಡುತ್ತಿದ್ದಾರೆ.

ಬಿಜೆಪಿಯ ಉಮೇಶ್ ಜಾಧವ್ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಬಿಜೆಪಿ ನಾಯಕರ ಮುಂದೆ ಭಾರೀ ಲಾಬಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಂಚೋಳಿ ಟಿಕೆಟ್ ಫೈನಲ್ ಮಾಡಿಸಲು ಎಲೆಕ್ಷನ್ ಮುಗಿದ ರಾತ್ರಿಯೇ ಜಾಧವ್ ಬೆಂಗಳೂರಿಗೆ ಬಂದಿದ್ದಾರೆ. ಬೈ ಎಲೆಕ್ಷನ್‍ನಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿ, ನನ್ನ ಮಗನಿಗೆ ಟಿಕೆಟ್ ಕೊಡದಿದ್ದರೆ, ನನ್ನ ಸಹೋದರನಿಗಾದರೂ ಟಿಕೆಟ್ ಕೊಡಿ ಅಥವಾ ನನ್ನ ಸಂಬಂಧಿಗಾದರೂ ಟಿಕೆಟ್ ಕೊಡಲೇಬೇಕು ಎಂದು ಭಾರೀ ಲಾಬಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಮೇ 19ಕ್ಕೆ ಉಪಚುನಾವಣೆ ನಡೆಯುತ್ತಿದ್ದು. ಇಂದು ಬೆಂಗಳೂರಿನ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಆಯ್ಕೆಯ ಸಭೆ ನಡೆದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೈ ಅಭ್ಯರ್ಥಿಯ ಆಯ್ಕೆ ನಡೆಯಲಿದೆ.

ಬಿಜೆಪಿಯಿಂದ ಜಾಧವ್ ಪುತ್ರ ಅವಿನಾಶ್ ಜಾಧವ್, ಸಹೋದರ ರಾಮಚಂದ್ರ ಜಾಧವ್, ಸಂಬಂಧಿ ಅರುಣ್ ಪವಾರ್ ಹಾಗೂ ನಿವೃತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಹೆಸರು ಕೇಳಿ ಬರುತ್ತಿದೆ. ಇನ್ನು ಕಾಂಗ್ರೆಸ್ಸಿನಿಂದ ಮಾಜಿ ಸಚಿವ ಬಾಬುರಾವ ಚಬ್ಹಾಣ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಭಾಷ್ ರಾಠೋಡ ಹೆಸರು ಕೇಳಿ ಬರುತ್ತಿದೆ. ಇದೇ ತಿಂಗಳ 29 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

Comments

Leave a Reply

Your email address will not be published. Required fields are marked *