ಬೆಂಗಳೂರು: ರಾಷ್ಟ್ರದಲ್ಲಿ ಅನೇಕ ಕಡೆ ಚುನಾವಣೆಯಲ್ಲಿ ಗೆದ್ದು ಸ್ವಾಮೀಜಿಗಳು ಸಂಸತ್ ಪ್ರವೇಶಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ದೊಡ್ಡ ಅನಾಹುತ ಆಯ್ತು ಎನ್ನುವ ರೀತಿ ಬಿಂಬಿಸುತ್ತಿದ್ದಾರೆ ಎಂದು ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮ ಪತ್ರ ಹಿಂಪಡೆದಿರುವುದರ ಕುರಿತು ಬೇಸರ ವ್ಯಕ್ತಪಡಿಸಿದರು.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಥಣಿ ಕ್ಷೇತ್ರದಲ್ಲಿ ಗುರು ದಾಶ್ಯಾಳ್, ಹಿರೇಕೆರೂರಿನಲ್ಲಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ಹಿಂಪಡೆದಿದ್ದಾರೆ. ಹಲವು ಮುಖಂಡರು ಒತ್ತಡ ಹೇರುವ ಮೂಲಕ ನಾಮಪತ್ರವನ್ನು ಹಿಂಪಡೆಯುವಂತೆ ಮಾಡಿದ್ದಾರೆ. ನಾವೇ ಸ್ವಾಮೀಜಿಯನ್ನು ಚುನಾವಣೆಗೆ ನಿಲ್ಲಿಸಿರಲಿಲ್ಲ. ಅವರೇ ಕೇಳಿದ್ದಾರೆ ಎಂದು ಬಿ-ಫಾರಂ ಕೊಟ್ಟಿದ್ದೆವು. ನಾನು ಅದರ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಿಲ್ಲ ಎಂದರು.

ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರಿದ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸ್ವಾಮೀಜಿಗಳಿಗೆ ಮಾನಸಿಕ ಒತ್ತಡ ಹಾಕಿ, ನಾಮಪತ್ರ ಹಿಂಪಡೆಯದಿದ್ದಲ್ಲಿ ದುಷ್ಪರಿಣಾಮ ಆಗುತ್ತದೆ ಎಂದು ಬೆದರಿಸಿದ್ದಾರೆ. ಸಿಎಂ ಯಡಿಯೂರಪ್ಪನವರ ಪುತ್ರ, ಸಂಸದ ರಾಘವೇಂದ್ರ ನಾಯಕತ್ವದಲ್ಲಿ ಒತ್ತಡ ಹಾಕಿಸಿದ್ದಾರೆ. ಏಳೆಂಟು ಸ್ವಾಮೀಜಿಗಳ ಮೂಲಕ ಒತ್ತಡ ಹಾಕಿಸಿದ್ದಾರೆ, ಅವರ ಹೆಸರನ್ನು ಹೇಳುವುದಿಲ್ಲ. ಆದರೆ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಹರಣ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ಜಯಲಕ್ಷ್ಮಿ ಯಾರಿಗೆ ಜಾರುತ್ತಾಳೋ ಗೊತ್ತಿಲ್ಲ, ಕಾದು ನೋಡೋಣ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಗಿರೀಶ್ ನಾಶಿ ಮನೆ ಮುಂದೆ ಇದ್ದ ಪೋಸ್ಟರ್ ಕೀಳಿಸಿದ್ದರು. ಅವರು ಯುದ್ಧ ಭೂಮಿಯಿಂದ ಓಡಿಹೋದರು ಎನ್ನುವ ರೀತಿ ಬಿಂಬಿಸಿದರು. ಆ ಪೋಸ್ಟರ್ ಕೀಳಿಸಿದ್ದು ಯಾರು ಅಂತ ಗೊತ್ತು. ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇನೆ, ಈ ವಿಚಾರವನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply