ಮುಂಜಾನೆ 4 ಗಂಟೆಗೆ ಮದ್ಯ ಸೇವಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಎಸ್‍ಆರ್‍ಎಸ್ ಟ್ರಾವೆಲ್ಸ್ ನ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಬಳಿ ನಡೆದಿದೆ.

ಶ್ರೀನಿವಾಸ್ ಅಲಿಯಾಸ್ ಸಿಬಿಐ ಮೃತಪಟ್ಟ ಪಾದಚಾರಿ. ಮೃತ ಶ್ರೀನಿವಾಸ್ ಮದ್ಯ ವ್ಯಸನಿಯಾಗಿದ್ದು, ಗ್ರಾಮದ ಹೊರವಲಯದಲ್ಲಿ ರಾತ್ರಿಯಿಡೀ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗೆ ಮುಂಜಾನೆ 4 ಗಂಟೆಗೆ ಹೋಗಿದ್ದನು. ಅಕ್ರಮ ಮದ್ಯ ಮಾರಾಟದ ಅಂಗಡಿಗೆ ಹೋಗಿ ಮದ್ಯ ಸೇವಿಸಿ ಬರುತ್ತಿದ್ದ ಶ್ರೀನಿವಾಸ್‍ಗೆ ಬಸ್ ಡಿಕ್ಕಿ ಹೊಡೆದಿದ್ದು, ತದನಂತರ ವಿದ್ಯುತ್ ಕಂಬಕ್ಕೂ ಸಹ ಡಿಕ್ಕಿ ಹೊಡೆದಿದೆ.

ಅಪಘಾತ ನಂತರ ಚಾಲಕ ಬಸ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆ ಬಳಿ ಬಸ್ ನಿಲ್ಲಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಹಲವರು ಬಲಿಯಾಗುತ್ತಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಪಟ್ಟವರು ಬ್ರೇಕ್ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *