3 ವಾಹನಗಳ ನಡ್ವೆ ಭೀಕರ ಅಪಘಾತ- ಮೂವರು ದುರ್ಮರಣ

– 11ಕ್ಕೂ ಹೆಚ್ಚು ಮಂದಿಗೆ ಗಾಯ

ಹಾಸನ: ಸಾರಿಗೆ ಬಸ್ ಸೇರಿ ಮೂರು ವಾಹನಗಳ ನಡುವೆ ಸರಣಿ ಅಪಘಾತವಾಗಿ ಮೂವರು ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಸೂಳೆಕೆರೆ ಬಳಿ ನಡೆದಿದೆ.

ಬೆಂಗಳೂರು-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ಘಟನೆ ನಡೆದಿದೆ. ಬಸವರಾಜು, ಯಲ್ಲಪ್ಪ ಮತ್ತು ರಮೇಶ್ ಮೃತ ದುರ್ದೈವಿಗಳು. ತಿಪಟೂರಿನಿಂದ ಅರಸೀಕೆರೆ ಕಡೆಗೆ ಸಾರಿಗೆ ಬಸ್ ಹೋಗುತ್ತಿತ್ತು. ಇತ್ತ ಅರಸೀಕೆರೆ ಕಡೆಯಿಂದ ತಿಪಟೂರಿಗೆ ಟಾಟಾಮ್ಯಾಜಿಕ್ ವಾಹನ ಬರುತ್ತಿತ್ತು.

ಬಸ್ ಮುಂದೆ ಲಾರಿಯೊಂದು ಹೋಗುತ್ತಿತ್ತು. ಈ ವೇಳೆ ಬಸ್ ಚಾಲಕ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಟಾಟಾಮ್ಯಾಜಿಕ್ ಡಿಕ್ಕಿ ಹೊಡೆದಿದ್ದಾನೆ. ನಂತರ ಸಾರಿಗೆ ಬಸ್, ಟಾಟಾಮ್ಯಾಜಿಕ್ ಮತ್ತು ಗೂಡ್ಸ್ ವಾಹನ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಟಾಟಾಮ್ಯಾಜಿಕ್‍ನಲ್ಲಿದ್ದ ಮೂವರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ 11ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳು ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *