ಸಾರಿಗೆ ಬಸ್ ಚಾಲಕ, ನಿರ್ವಾಹಕನಿಂದ ಪ್ರಯಾಣಿಕನ ಮೇಲೆ ಹಲ್ಲೆ

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಮೇಲೆ ಸಾರಿಗೆ ಬಸ್ ಸಿಬ್ಬಂದಿ ಹಿಗ್ಗಾಮುಗ್ಗ ಥಳಿಸಿ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಬಸ್ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕನಿಗೆ ಥಳಿಸಿದ್ದಾರೆ. ಹುಬ್ಬಳ್ಳಿ ವಿಭಾಗದ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ರಾತ್ರಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಚಾಲಕನಿಗೆ ಏನೋ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಬಸ್ ಚಾಲಕ ರಾಯಾಪೂರ ಬಸ್ ನಿಲ್ದಾಣದ ಬಳಿ ರಸ್ತೆ ಪಕ್ಕದ್ದಲ್ಲಿ ಬಸ್ ನಿಲ್ಲಿಸಿ, ಪ್ರಯಾಣಿಕನಿಗೆ ಹಿಗ್ಗಾಮುಗ್ಗ ಥಳಿಸಲು ಆರಂಭಿಸಿದನು.

ಈ ವೇಳೆ ಚಾಲಕನಿಗೆ ಬಸ್ ನಿರ್ವಾಹಕ ಕೂಡ ಸಾಥ್ ಕೊಟ್ಟಿದ್ದು, ಇಬ್ಬರೂ ಸೇರಿ ಪ್ರಯಾಣಿಕನಿಗೆ ಹೊಡೆದಿದ್ದಾರೆ. ಪ್ರಯಾಣಿಕ ಮೇಲಿನ ಹಲ್ಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ರಾತ್ರಿ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇತರೆ ಪ್ರಯಾಣಿಕರು ಚಾಲಕ, ನಿರ್ವಾಹಕ ವ್ಯಕ್ತಿಗೆ ಥಳಿಸುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಥಳಿತಕ್ಕೊಳಗಾದ ಪ್ರಯಾಣಿಕನ ವಿವರ ಕೂಡ ತಿಳಿದು ಬಂದಿಲ್ಲ. ವಿಡಿಯೋದಲ್ಲಿ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕನಿಗೆ ಹೊಡೆಯುವಾಗ ‘ಅವನನ್ನು ಬಸ್ಸಿನಿಂದ ಕೆಳಗೆ ಇಳಿಸಿ’ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಪ್ರಯಾಣಿಕನಿಗೆ ಹೊಡೆಯುವಾಗ ಅಲ್ಲಿಯೇ ಒಬ್ಬ ಪೊಲೀಸ್ ಕೂಡ ಇರುವುದು ವಿಡಿಯೋದಲ್ಲಿ ಕಂಡು ಬಂದಿದೆ.

Comments

Leave a Reply

Your email address will not be published. Required fields are marked *