ಕಾರ್ಕಳ | ಲಾರಿಗೆ ಬಸ್ ಡಿಕ್ಕಿ‌ – 13 ಮಂದಿಗೆ ಗಾಯ

– ಮಂಜು ಕವಿದು ದುರಂತ

ಉಡುಪಿ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್‌ (Bus) ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ನಡೆದಿದೆ. ಅಪಘಾತದಲ್ಲಿ (Accident) ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿಕ್ಕೋಡಿ (Chikkodi) ಡಿಪೋಗೆ ಸೇರಿದ ಬಸ್ ಬೆಳಗಾವಿಯಿಂದ ಧರ್ಮಸ್ಥಳದ (Dharmasthala) ಮಾರ್ಗದಲ್ಲಿ ಸಂಚರಿಸುತ್ತಿತ್ತು. ಈ ವೇಳೆ, ಕಾರ್ಕಳ ದಾಟಿ ಸಾಣೂರು ಶ್ರೀರಾಮ ಮಂದಿರದ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 13 ಮಂದಿ ಗಾಯಗೊಂಡಿದ್ದಾರೆ. ಅಪಘಾತದಿಂದ ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್‌ ಗುದ್ದಿದ ರಭಸಕ್ಕೆ ಲಾರಿ ಡಿವೈಡರ್‌ ಮೇಲೆ ಹೋಗಿ ನಿಂತಿದೆ .

ಸ್ಥಳೀಯರು ಗಾಯಾಳುಗಳನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಜು ಆವರಿಸಿದ ಕಾರಣ ನಿಂತಿದ್ದ ಲಾರಿ ಕಾಣಿಸಲಿಲ್ಲ ಎನ್ನಲಾಗಿದೆ.

ಕಾರ್ಕಳ ಠಾಣಾ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.