ಧಗಧಗಿಸಿದ 40 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್

ಬೆಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಮತ್ತು ಅಕ್ಕಪಕ್ಕದ ವಾಹನ ಚಾಲಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ನೋಡ ನೋಡುತ್ತಿದ್ದಂತೆ ಇಡೀ ಶರ್ಮಾ ಟ್ರಾವೆಲ್ಸ್ ಬೆಂಕಿಗಾಹುತಿಯಾಗಿದೆ. ಬೆಂಗಳೂರಿನಿಂದ ತಮಿಳುನಾಡಿನ ತಿಪಟ್ಟುಗೆ ಶರ್ಮಾ ಟ್ರಾವೆಲ್ಸ್‌ನ ಬಸ್ ತೆರಳುತ್ತಿತ್ತು. ಈ ಬಸ್ಸಿನಲ್ಲಿ 40 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದರೆ ಬೆಳಗಿನ ಜಾವ ಸುಮಾರು 4 ಗಂಟೆಗೆ ಕರ್ನಾಟಕ – ತಮಿಳುನಾಡು ಗಡಿ ಶೂಲಗಿರಿ ಸಮೀಪ ಬಸ್ಸಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬಸ್ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡ ಕೂಡಲೇ ಇದನ್ನು ಅಕ್ಕಪಕ್ಕದ ವಾಹನ ಸವಾರರು ನೋಡಿದ್ದು, ತಕ್ಷಣ ಬಸ್ ಚಾಲಕನಿಗೆ ತಿಳಿಸಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಚಾಲಕ ಬಸ್ಸಿನಿಂದ ಕೆಳಗಿಳಿಸಿದ್ದಾನೆ. ಈ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬೆಳಗಿನ ಜಾವ ಆದ್ದರಿಂದ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವುದು ತಡವಾಗಿದ್ದು, ಬಸ್ಸಿನಲ್ಲಿದ್ದ ಸಾಮಾನು ಮತ್ತು ಲಗೇಜು ಸಂಪೂರ್ಣ ಸುಟ್ಟು ಹೋಗಿದ್ದು, ಇತ್ತ ಬಸ್ ಕೂಡ ಬೆಂಕಿಗಾಹುತಿಯಾಗಿದೆ. ಸದ್ಯಕ್ಕೆ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಬಸ್ಸಿನ ಎಂಜಿನ್ ದೋಷದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಮಾಹಿತಿ ತಿಳಿದು ಶೂಲಗಿರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *