ವಿದ್ಯುತ್ ಟಿಸಿಗೆ ಡಿಕ್ಕಿಯಾದ ಸರ್ಕಾರಿ ಬಸ್ – ತಪ್ಪಿತು ಭಾರೀ ಅನಾಹುತ

ವಿಜಯಪುರ: ವಿದ್ಯುತ್ ಟಿಸಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಘಟನೆ ವಿಜಯಪುರದ ಇಂಡಿ ಪಟ್ಟಣದಲ್ಲಿ ನಡೆದಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.

ಬಸ್ ಬಳ್ಳಾರಿಯಿಂದ ಇಂಡಿಗೆ ಆಗಮಿಸುತ್ತಿತ್ತು. ಈ ವೇಳೆ ಬಸ್ ವಿದ್ಯುತ್ ಟಿಸಿಗೆ ಡಿಕ್ಕಿ ಹೊಡೆದಿದೆ. ಟಿಸಿಗೆ ಅಲ್ಲದೆ ರಸ್ತೆಯ ಡಿವೈಡರ್ ಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಇಂಡಿ ಪಟ್ಟಣದ ಸ್ಟೇಟ್ ಬ್ಯಾಂಕ್ ಕಟ್ಟಡಕ್ಕೆ ಬಸ್ ನುಗ್ಗಿದೆ. ಬಸ್ ಡಿಕ್ಕಿಯಾದ ಕೂಡಲೇ ಟಿಸಿ ಟ್ರಿಪ್ ಆಗಿದೆ. ಇದನ್ನು ಅರಿತ ಹೆಸ್ಕಾಂನ ಇಂಡಿ ಶಾಖಾಧಿಕಾರಿ ಗುರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಬಸ್ ಚಾಲಕ ಬೆಳಗ್ಗಿನ ಜಾವ 5:30ರ ಸುಮಾರಿಗೆ ನಿದ್ರೆಗೆ ಜಾರಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿದ್ದ ಓರ್ವ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅವಘಡದ ಬಳಿಕ ಪ್ರಯಾಣಿಕರು ಬೇರೆ ಬಸ್‍ನಲ್ಲಿ ತೆರಳಿದ್ದಾರೆ.

ಈ ಬಗ್ಗೆ ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *