Budget 2022 : ಚುನಾವಣಾ ಓಲೈಕೆ ಇಲ್ಲದ, ಜನಪ್ರಿಯ ಘೋಷಣೆಗಳಿಲ್ಲದ ಬಜೆಟ್‌

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಯಾವುದೇ ಜನಪ್ರಿಯ ಘೋಷಣೆ ಇಲ್ಲದ ಮೇಲ್ನೋಟಕ್ಕೆ ನೀರಸವಾಗಿ ಕಾಣುವ ಬಜೆಟ್‌ ಮಂಡಿಸಿ ಆಶ್ಚರ್ಯ ಮೂಡಿಸಿದ್ದಾರೆ.

ಸಾಧಾರಣಾವಾಗಿ ಕೇಂದ್ರ ಬಜೆಟ್‌ನಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಭರಪೂರ ಯೋಜನೆಗಳನ್ನು ಪ್ರಕಟಿಸುವುದು ಸಾಮಾನ್ಯ. ಕಳೆದ ವರ್ಷದವರೆಗೂ ಈ ಸಂಪ್ರದಾಯ ಪಾಲನೆಯಾಗುತ್ತಿತ್ತು. ಆದರೆ ಈ ಬಾರಿ ಈ ಸಂಪ್ರದಾಯವನ್ನು ಧಿಕ್ಕರಿಸಿ ಭಾರತದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡನೆ ಮಾಡಲಾಗಿದೆ ಎಂಬ ಅಭಿಪ್ರಾಯವನ್ನು ಆರ್ಥಿಕ ತಜ್ಞರು, ಉದ್ಯಮಿಗಳು ಹೊರಹಾಕಿದ್ದಾರೆ.

ಉತ್ತರಪ್ರದೇಶ, ಪಂಜಾಬ್‌, ಗೋವಾ, ಮಣಿಪುರ, ಉತ್ತರಾಖಂಡ್‌ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಈ ರಾಜ್ಯಗಳಿಗೆ ಭರಪೂರ ಯೋಜನೆ ಜಾರಿಯಾಗಬಹುದು ಎಂಬ ಸಹಜ ವಿಶ್ಲೇಷಣೆ ಕೇಳಿಬಂದಿತ್ತು. ಕಳೆದ ಬಾರಿಯ ಬಜೆಟ್‌ನಲ್ಲೂ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯಗಳಿಗೆ ಯೋಜನೆ, ಅನುದಾನ ಸಿಕ್ಕಿದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಅಭಿಪ್ರಾಯ ಈ ಬಾರಿ ವ್ಯಕ್ತವಾಗದೇ ಇರಲು ಬಜೆಟ್‌ ರೂಪಿಸಲಾಗಿದೆ. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

ರಾಜ್ಯಗಳಿಗೆ ಭರಪೂರ ಅನುದಾನ, ಯೋಜನೆ ಪ್ರಕಟಿಸುತ್ತಿದ್ದ ಕಾರಣ ವಿರೋಧ ಪಕ್ಷಗಳು, ಮಾಧ್ಯಮಗಳು ಇದು ಚುನಾವಣಾ ಓಲೈಸುವ ಬಜೆಟ್‌. ರಾಜ್ಯಗಳಿಗೆ ಮೀಸಲಾದ ಬಜೆಟ್‌ ಎಂದು ಪ್ರತಿ ವರ್ಷ ಟೀಕೆ ಮಾಡುತ್ತಿದ್ದವು. ಆದರೆ ಈ ಬಾರಿ ಈ ಟೀಕೆಗೆ ಅವಕಾಶ ನೀಡದಂತೆ ಸಮಗ್ರ ಭಾರತವನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: Budget 2022: ರಾಷ್ಟ್ರೀಯ ಹೆದ್ದಾರಿ 25 ಸಾವಿರ ಕಿ.ಮೀ ವಿಸ್ತರಣೆ – 400 ವಂದೇ ಭಾರತ್ ರೈಲು ತಯಾರಿ ಗುರಿ

ಈ ಬಾರಿ ಬಜೆಟ್‌ನಲ್ಲಿ ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡಲಾಗಿಲ್ಲ. ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವುದು ಸುಲಭ. ಆದರೆ ಜಾರಿ ಮಾಡುವುದು ಕಷ್ಟ. ಈ ಕಾರಣಕ್ಕೆ ಏನೋ ಎಂಬಂತೆ ಜನಪ್ರಿಯ ಘೋಷಣೆ ಇಲ್ಲದೇ ಭವಿಷ್ಯದಲ್ಲಿ ಡಿಜಿಟಲ್‌ ಶಕ್ತಿ ಆಗಿರುವ ಕಾರಣ ಡಿಜಿಟಲ್‌ ಕ್ಷೇತ್ರದತ್ತ ಗಮನ ನೀಡಲಾಗಿದೆ.

ಮೂಲಸೌಕರ್ಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲು, ಬಂದರು ಅಭಿವೃದ್ಧಿ ಪಡಿಸುವ ಯೋಜನೆ ಜಾರಿ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರೈಲು ಒಂದು ರಾಜ್ಯಕ್ಕೆ ಮಾತ್ರ ಮೀಸಲಾಗಿರುವುದಿಲ್ಲ. ಹಲವು ರಾಜ್ಯಗಳನ್ನು ಸಂಪರ್ಕಿಸುವುದರಿಂದ ಆರ್ಥಿಕ ವ್ಯವಹಾರ, ಪ್ರವಾಸೋದ್ಯಮಕ್ಕೆ ನೆರವಾಗಲಿದೆ.

ಈಗ ರೈಲ್ವೇ ಬಜೆಟ್‌ ಹಣಕಾಸು ಬಜೆಟ್‌ನಲ್ಲಿ ವಿಲೀನಗೊಂಡಿದೆ. ಇಲ್ಲದೆ ಇದ್ದಲ್ಲಿ ಹಳಿಯಲ್ಲಿ ಓಡದ ರೈಲು ಸೇರಿದಂತೆ ಬರೀ ಭಾಷಣಕ್ಕೆ ಮಾತ್ರ ಮೀಸಲಾದ ಯೋಜನೆಗಳು ಪ್ರಕಟವಾಗುತ್ತಿತ್ತು. ಆದರೆ ಈ ಬಾರಿ ಭಾರತದ ಭವಿಷ್ಯದ ಅವಶ್ಯಕತೆಗಳನ್ನು ಇಟ್ಟುಕೊಂಡು ಯಾವುದೇ ಓಲೈಕೆ ಇಲ್ಲದ ಹೊಸ ಪದ್ದತಿ ಮತ್ತು ಸರಿಯಾದ ಪದ್ದತಿಯಂತೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *