ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಾಸಾಗಲು ಬಿಎಸ್‍ವೈ ಸೂಪರ್ ಪ್ಲಾನ್

ಬೆಂಗಳೂರು: ನೂತನ ಸಿಎಂ ಆಗಿರುವ ಬಿ.ಎಸ್.ಯಡಿಯೂರಪ್ಪ ಸೋಮವಾರ ಬಹುಮತ ಸಾಬೀತುಪಡಿಸಬೇಕಿದೆ. ಹೀಗಾಗಿ ಬಿಜೆಪಿಯ ಶಾಸಕರ ಕಾವಲಿಗೆ ಯಡಿಯೂರಪ್ಪನವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.

ಏನದು ಪ್ಲಾನ್?
ಸೋಮವಾರ ಸದನದಲ್ಲಿ ಬಹುಮತ ಸಾಬೀತು ಪಡಿಸುವವರೆಗೆ ಶಾಸಕರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತೆ ಒಂದು ತಂಡವನ್ನೇ ರಚಿಸಿದ್ದಾರೆ. ತಮ್ಮದೇ ಪಕ್ಷದ ಶಾಸಕರನ್ನು ಕಾಯಲು ಕಾವಲುಗಾರರನ್ನು ನೇಮಿಸಿದ್ದು, ಎಲ್ಲ 105 ಜನ ಶಾಸಕರ ಮೇಲೂ ಕಣ್ಗಾವಲಿಡಲು ಕಾವಲುಗಾರನ್ನು ನೇಮಿಸಿದ್ದಾರೆ. ಶಾಸಕರನ್ನು ಕಾಯಲು ವ್ಯವಸ್ಥಿತ ತಂಡವನ್ನು ರಚಿಸಲಾಗಿದ್ದು, ತಲಾ 10 ಶಾಸಕರಿಗೆ ಒಬ್ಬ ಕಾವಲುಗಾರ ಮುಖಂಡನನ್ನು ನೇಮಕ ಮಾಡಲಾಗಿದೆಯಂತೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಗೊತ್ತಿಲ್ಲದವರನ್ನು ಕಾವಲಿಗೆ ನೇಮಿಸದೆ, ನಂಬಿಕಸ್ತ ಆಪ್ತರನ್ನೇ ಕಾವಲುಗಾರರಾಗಿ ಯಡಿಯೂರಪ್ಪನವರು ನೇಮಿಸಿದ್ದಾರೆ. ಶಾಸಕರು ಈ ಕಾವಲುಗಾರರ ಕಣ್ಣಳತೆಯಲ್ಲೇ ಇರಬೇಕೆಂದು ಸೂಚಿಸಿದ್ದು, ಸೋಮವಾರ ಬಹುಮತ ಸಾಬೀತುಪಡಿಸುವರೆಗೆ ಕಾವಲುಗಾರ ಮುಖಂಡರ ಸುಪರ್ದಿಯಲ್ಲೇ ಎಲ್ಲ ಶಾಸಕರು ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.

ರಿವರ್ಸ್ ಆಪರೇಷನ್ ಕುರಿತು ಮುನ್ನೆಚ್ಚರಿಕೆ ಮಾತ್ರವಲ್ಲ, ಪುಣೆಯಲ್ಲಿರುವ ಅತೃಪ್ತ ಶಾಸಕರ ಕುರಿತು ಸಹ ನಿಗಾ ವಹಿಸುವಂತೆ ಯುಡಿಯೂರಪ್ಪನವರು ಸೂಚಿಸಿದ್ದು, ಮೈತ್ರಿ ಪಕ್ಷಗಳ ಯಾವ ನಾಯಕರಿಗೂ ಅತೃಪ್ತ ಶಾಸಕರು ಸಿಗದಂತೆ ಎಚ್ಚರಿಕೆ ವಹಿಸಲು ವ್ಯವಸ್ಥಿತ ಜಾಲವನ್ನು ಹೆಣೆದಿದ್ದಾರೆ. ಶಾಸಕರನ್ನು ಉಳಿಸಿಕೊಳ್ಳಲು ಹಾಗೂ ಬಹುಮತ ಸಾಬೀತು ಪಡಿಸಲು ಇಷ್ಟೆಲ್ಲ ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *