ಬಿಎಸ್ ವೈ ಡೈರಿ ಪ್ರಕರಣ- ಇದು ಜೋಕ್ ಆಫ್ ದಿ ಇಯರ್ ಅಂದ್ರು ಬಿ.ವೈ.ರಾಘವೇಂದ್ರ

– ತಂದೆಯವರಿಗೆ ಡೈರಿ ಬರೆಯುವ ಅಭ್ಯಾಸವಿಲ್ಲ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಡೈರಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಪುತ್ರ ಬಿ.ವೈ.ರಾಘವೇಂದ್ರ ಅವರು, ಇದು ಜೋಕ್ ಆಫ್ ದಿ ಇಯರ್. ಹಿಟ್ ಅಂಡ್ ರನ್ ಥರ ಇದು. ಡೈರಿ ಬರೆಯುವ ಅಭ್ಯಾಸವೇ ಯಡಿಯೂರಪ್ಪ ಅವರಿಗೆ ಇಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಟೆಂಪಲ್ ರನ್ ಮಾಡಿ ಡ್ರಾಮಾ ಮಾಡುವ ಪ್ರಯತ್ನ ಕಾಂಗ್ರೆಸ್ ನಾಯಕರು ಮಾಡಿದ್ದರು. ವಿರೋಧ ಪಕ್ಷದವರಿಗೆ ಕನಾಟಕದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಆದರಿಂದ ಯಡಿಯೂರಪ್ಪ ಅವರ ಮೇಲೆ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರತೀ ಪೇಜಿಗೂ ಸೈನ್ ಹಾಕಿ ಭಗವದ್ಗೀತೆಯಲ್ಲಿ ಇಡೋ ಅಗತ್ಯವೇನಿತ್ತು? ಅವರ ಹಸ್ತಾಕ್ಷರ ಸೃಷ್ಟಿ ಮಾಡಿ ಇದನ್ನು ಮಾಡಿದ್ದಾರೆ. ಕಾಂಗ್ರೆಸ್‍ನವರು ವಾಮ ಮಾರ್ಗ ಉಪಯೋಗಿಸುತ್ತಿದ್ದಾರೆ. ಡೈರಿ 2009ರಲ್ಲಿ ಈ ಪುನ್ಯಾತ್ಮರಿಗೆ ಸಿಕ್ಕಿದೆ ಅಂದಮೇಲೆ ಇದೂವರೆಗೂ ಅದನ್ನ ಇಟ್ಟುಕೊಂಡು ಏನ್ ಮಾಡಿದರು? ಕಳೆದ ಐದು ವರ್ಷ ಸಿದ್ದರಾಮಯ್ಯ ಸರ್ಕಾರ ಏನು ನಿದ್ದೆ ಮಾಡ್ತಿದ್ದರಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:1800 ಕೋಟಿ ಬಿಎಸ್‌ವೈ ಡೈರಿ ಬಾಂಬ್ – ಗಡ್ಕರಿಗೆ 150 ಕೋಟಿ, ಅಡ್ವಾಣಿಗೆ 50 ಕೋಟಿ!

2009ರಲ್ಲಿ ಯಡಿಯೂರಪ್ಪ ಅವರ ಮೇಲೆ ಯಾವ ಪ್ರಕರಣ ಇತ್ತು? ಎಂದು ವಿರೋಧ ಪಕ್ಷಗಳ ಮುಂದೆ ಪ್ರಶ್ನೆ ಇಟ್ಟಿದ್ದಾರೆ. ಹಾಗೆಯೇ ಇದರಿಂದ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರೋದಿಲ್ಲ. ಇದರ ಬಗ್ಗೆ ತನಿಖೆ ನಡೆಸಬೇಕು. ಯೋಗ್ಯತೆ ಬಿಟ್ಟು ವಾಮಮಾರ್ಗದಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *