ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧರಿಗೆ ಬೆಣ್ಣೆನಗರಿಯಲ್ಲಿ ಅದ್ಧೂರಿ ಸ್ವಾಗತ

ದಾವಣಗೆರೆ: ಕಳೆದ 20 ವರ್ಷಗಳಿಂದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನಿವೃತ್ತ ಯೋಧರ ಸಂಘ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕೋರಲಾಯಿತು.

ಸಾಸಲು ಗ್ರಾಮದ ಜಯಣ್ಣ, ಕೆಟಿಜೆ ನಗರದ ಸುಶೀಲ್ ಕುಮಾರ್, ತುರ್ಚುಘಟ್ಟದ ಶ್ರೀನಿವಾಸ್ ನಿವೃತ್ತಿ ಯೋಧರು. ಇಪ್ಪತ್ತುವರೆ ವರ್ಷಗಳ ಕಾಲ ಜಮ್ಮು-ಕಾಶ್ಮೀರ, ಹಿಮಾಚಲಪ್ರದೇಶ, ಹರ್ಯಾಣ, ಮೇಘಾಲಯ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸಿದ್ದ ಯೋಧರು ಇಂದು ನಿವೃತ್ತಿಯಾಗಿ ತವರಿಗೆ ಆಗಮಿಸಿದರು.

ನಿವೃತ್ತಿಯಾಗಿ ತವರೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಯೋಧರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಆರತಿ ಎತ್ತಿ ತಿಲಕವಿಟ್ಟು ಸಿಹಿ ಹಂಚಿದರು. ಅಲ್ಲದೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಮಟೆ ಬಾರಿಸಿಕೊಂಡು ಅದ್ಧೂರಿಯಾಗಿ ಸ್ವಾಗತ ಕೋರಿ ಹೂವಿನ ಹಾರ ಹಾಕಿ, ಮೆರವಣಿಗೆ ಮಾಡಿದರು.

ದೇಶಕ್ಕಾಗಿ ಕೆಲಸ ಮಾಡಿದ್ದು ನಮಗೆ ತುಂಬಾ ಹೆಮ್ಮೆಯಿದೆ. ಚಿಕ್ಕ ವಯಸ್ಸಿನಿಂದಲೂ ಸಾಕಷ್ಟು ಆಸೆಯನ್ನು ಇಟ್ಟುಕೊಂಡಿದ್ದೆವು. ಶಾಲೆಯಲ್ಲಿ ಶಿಕ್ಷಕರು ದೇಶಾಭಿಮಾನವನ್ನು ತುಂಬಿದ್ದಕ್ಕೆ ನಾವು ಇಂದು ಯೋಧರಾಗಿದ್ದೇವೆ. ಅವಕಾಶ ಸಿಕ್ಕರೆ ಮತ್ತೆ ದೇಶ ಸೇವೆಗೆ ಹೋಗುತ್ತೇವೆ. ಅಲ್ಲದೆ ಯುವಕರನ್ನು ದೇಶ ಸೇವೆ ಮಾಡಲು ತರಬೇತಿ ನೀಡುತ್ತೇವೆ ಎಂದು ಹೆಮ್ಮೆಯಿಂದ ನಿವೃತ್ತ ಯೋಧರು ಹೇಳಿಕೊಂಡರು.

Comments

Leave a Reply

Your email address will not be published. Required fields are marked *