ಬಿಎಸ್‍ವೈರಿಂದ ರಂಭಾಪುರಿ ಶ್ರೀ ಭೇಟಿ – ಲೋಕ ಫಲಿತಾಂಶದವರೆಗೂ ಸಹನೆಯಿಂದಿರಿ ಎಂದ ಶ್ರೀಗಳು

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಇಂದು ರಂಭಾಪುರಿ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು, ಕುಂದಗೋಳ ಮತ್ತು ಚಿಂಚೋಳಿ ಮತದಾರರು ಒಳ್ಳೆಯವರನ್ನು ಆಯ್ಕೆ ಮಾಡಬೇಕು. ಜಾತ್ಯಾತೀತವಾಗಿ ಎಲ್ಲ ವರ್ಗದ ಜನರ ಸಮಸ್ಯೆಗಳನ್ನು ಬಗೆಹರಿಸುವವರನ್ನು ಆಯ್ಕೆ ಮಾಡಬೇಕು. ಅಲ್ಲದೇ ಲೋಕಸಭಾ ಚುನಾವಣೆ ಫಲಿತಾಂಶ ಬರುವವರೆಗೆ ಎಲ್ಲರೂ ಸಹನೆಯಿಂದ ಇರಬೇಕು ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಧರ್ಮ ಹೋರಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಧರ್ಮ ಒಡೆಯಲು ಹೋದವರು ಪ್ರತಿಫಲ ಅನುಭವಿಸಿದ್ದಾರೆ. ಮತ್ತೆ ಯಾರಾದರೂ ದ್ವಂದ್ವ ಭಾವನೆ ಹುಟ್ಟುಹಾಕಿದರೆ ಜನ ಪಾಠ ಕಲಿಸುತ್ತಾರೆ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ, ಅನ್ಯಭಾವ ಹುಡುಕುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ಧರ್ಮಪೀಠಗಳನ್ನು ಎಳೆದು ತರಬಾರದು. ಕೆಲವರು ತಪ್ಪನ್ನು ಒಪ್ಪಿಕೊಂಡಿದ್ದಾರೆ, ಇನ್ನು ಕೆಲವರು ತಪ್ಪನ್ನು ಮುಂದುವರಿಸಿದ್ದಾರೆ. ಅಂತವರಿಗೆ ಜನರು ಬೆಲೆ ಕೊಡಲ್ಲ. ನರೇಂದ್ರ ಮೋದಿಯವರು ಇನ್ನೊಂದು ಅವಧಿಗೆ ದೇಶದ ಪ್ರಧಾನಿ ಆಗಬೇಕು ಎನ್ನುವುದು ನಮ್ಮ ಆಶಯ. ನಾನು ಸಂಚರಿಸಿದಲ್ಲೆಲ್ಲ ಜನ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *