ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಸರ್ಕಾರ- ದುಪ್ಪಟ್ಟು ದರ ವಸೂಲಿ ಮಾಡದಂತೆ ಸಿಎಂ ಆದೇಶ

– ನಿಟ್ಟುಸಿರು ಬಿಟ್ಟ ಕಾರ್ಮಿಕರು

ಬೆಂಗಳೂರು: ತಮ್ಮ ಊರುಗಳಿಗೆ ಹೋಗಲು ಮುಂದಾಗಿದ್ದ ವಲಸೆ ಕಾರ್ಮಿಕರಿಂದ ದುಪ್ಪಟ್ಟು ಬಸ್ ಟಿಕೆಟ್ ದರವನ್ನು ಪಡೆಯಲಾಗುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ, ದುಪ್ಪಟ್ಟು ದರ ವಸೂಲಿ ಮಾಡದಂತೆ ಆದೇಶ ಹೊರಡಿಸಿದೆ.

ವಲಸೆ ಕಾರ್ಮಿಕರಿಂದ ದುಪಟ್ಟು ಹಣ ಪಡೆಯಬೇಡಿ. ಒನ್ ಸೈಡ್ ಬಸ್ ಟಿಕೆಟ್ ದರವನ್ನು ಮಾತ್ರ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ ಬಿಗ್ ಶಾಕ್- ಬೆಂಗ್ಳೂರಿನಿಂದ ಹೊರಟವ್ರಿಗೆ ಡಬಲ್ ದರದ ಬಿಸಿ

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುರೇಶ್ ಕುಮಾರ್, ಕೆಎಸ್ಆರ್‌ಟಿಸಿ ಬಸ್‍ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ ಕಾರ್ಮಿಕರಿಗೆ ಹಳೇ ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದೇ ಕೈಯಲ್ಲಿ ಹಣ ಇಲ್ಲದಂತೆ ಆಗಿದೆ. ಅವರ ಬಳಿ ಟಿಕೆಟ್‍ಗೆ ಹಣ ಕೇಳುವುದು ಬೇಡ. ಉಚಿತವಾಗಿ ಅವರವರ ಊರುಗಳಿಗೆ ಕಳಿಸಿಕೊಡುವ ಕೆಲಸ ಸರ್ಕಾರ ಮಾಡಲಿ. ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದರು.

ಈ ಮೊದಲು ಎಲ್ಲಿಗೆ, ಎಷ್ಟು ದರ ಇತ್ತು?
ಬಾಗಲಕೋಟೆಗೆ ಈ ಹಿಂದೆ ನಿಗದಿಯಾಗಿದ್ದ 700 ರೂ. ಬದಲು 1,311 ರೂ. ಪಡೆಯಲಾಗುತ್ತಿದೆ. ಅಂತೆಯೇ ಬಳ್ಳಾರಿಗೆ ತೆರಳಲು 450 ರೂ. ಬದಲು 884 ರೂ., ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ವಸೂಲಿ ಮಾಡಲಾಗುತ್ತಿದೆ. ಬೆಳಗಾವಿಗೆ ಹೋಗಲು 800 ರೂ. ಬದಲು 1,478 ರೂ., ಚಿತ್ರದುರ್ಗಕ್ಕೆ ತೆರಳಲು 300 ರೂ. ಬದಲು 602 ರೂ., ಕೊಪ್ಪಳಕ್ಕೆ ತೆರಳಲು 600 ರೂಪಾಯಿ ಬದಲು 1,000 ರೂ., ಕಲಬುರಗಿಗೆ ತೆರಳಲು 900 ರೂಪಾಯಿ ಬದಲು 1,619 ರೂ. ಪಡೆಯಲಾಗುತ್ತಿದೆ. ಹೀಗೆ ವಿವಿಧ ಪ್ರದೇಶಗಳಿಗೆ ಹೋಗಲು ಸಿದ್ಧರಾದ ವಲಸೆ ಕಾರ್ಮಿಕರಿಗೆ ಬಸ್ ಟಿಕೆಟ್ ದರ ಆಘಾತ ನೀಡಿದೆ.

Comments

Leave a Reply

Your email address will not be published. Required fields are marked *