ತಂಗಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಸಹೋದರನಿಂದ ಯುವಕನ ಕೊಲೆ

ಬಾಗಲಕೋಟೆ: ಸಹೋದರಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಯುವಕನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ.

ನಬಿಸಾಬ್ ತಹಸೀಲ್ದಾರ(22) ಕೊಲೆಯಾದ ಯುವಕ. ನಬಿಸಾಬ್ ಸುನಗ ಗ್ರಾಮದವನಾಗಿದ್ದು, ಅದೇ ಗ್ರಾಮದ ವಿಠ್ಠಲ ವಡವಾಣಿಯ ಸಹೋದರಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು. ಹಾಗಾಗಿ ವಿಠ್ಠಲ ತನ್ನ ಸ್ನೇಹಿತ ಮಂಜುನಾಥ್ ಜೊತೆ ಸೇರಿ ನಬಿಸಾಬ್‍ನ ಕೊಲೆ ಮಾಡಿದ್ದಾನೆ.

ಕೊಲೆಯಾದ ನಬಿಸಾಬ್, ವಿಠ್ಠಲ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಈ ವಿಷಯ ತಿಳಿದ ವಿಠ್ಠಲ, ನಬಿಸಾಬ್‍ಗೆ ಎಚ್ಚರಿಕೆ ನೀಡಿ, ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡದಂತೆಯೂ ತಾಖೀತು ಮಾಡಿದ್ದನು. ಆದರೂ ವಿಠ್ಠಲ ಸಹೋದರಿ ಜೊತೆ ನಬಿಸಾಬ್ ಫೋನಿನಲ್ಲಿ ಮಾತು ಮುಂದುವರಿಸಿದ್ದನು.

ಗುರುವಾರ ರಾತ್ರಿ ವಿಠ್ಠಲ ಹಾಗೂ ಮಂಜುನಾಥ್ ಸುನಗ ಕ್ರಾಸ್ ಬಳಿ ನಬಿಸಾಬ್‍ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಸದ್ಯ ಕೊಲೆ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *