ಓಡಿಹೋಗಿ ತಂಗಿಯನ್ನು ಮದುವೆಯಾದವನ ಬೆರಳನ್ನೇ ಕತ್ತರಿಸಿದ ಅಣ್ಣ

ಬೆಂಗಳೂರು: ತಂಗಿಯನ್ನು ಪ್ರೇಮ ವಿವಾಹವಾಗಿದ್ದ ಬಾವನ ಮೇಲೆ ಅಣ್ಣ ಕೊಲೆಗೆ ಯತ್ನಿಸಿ, ಕಿರು ಬೆರಳು ಕತ್ತರಿಸಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ.

ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ನಿವಾಸಿ ಹನುಮಂತನ ಮೇಲೆ ಹಲ್ಲೆ ಮಾಡಲಾಗಿದೆ. ಹನುಮಂತನ ಅತ್ತೆ ಮಗ ಸಂತೋಷ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಆಗಸ್ಟ್ 12ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೋಷ್ ಮನೆಯಲ್ಲೇ ವಾಸವಾಗಿದ್ದ ಹನುಮಂತ ಆರೋಪಿಯ ತಂಗಿಯನ್ನು ಪ್ರೀತಿಸಿದ್ದನು. ಇದಕ್ಕೆ ಸಂತೋಷ್ ತಂಗಿ ಕೂಡ ಒಪ್ಪಿದ್ದಳು. ಆದರೆ ಮನೆಯಲ್ಲಿ ತಮ್ಮ ಪ್ರೀತಿ ಒಪ್ಪದ ಕಾರಣಕ್ಕೆ ಇಬ್ಬರೂ ಕಳೆದ ಒಂದು ವರ್ಷದ ಹಿಂದೆ ಓಡಿಹೋಗಿದ್ದರು. ಆ ನಂತರ ಮದುವೆಯನ್ನು ಕೂಡ ಮಾಡಿಕೊಂಡಿದ್ದರು. ಇತ್ತ ಮನೆಯ ಮರ್ಯಾದೆ ಕಳೆದಿದ್ದಾರೆ ಎಂದು ಸಂತೋಷ್‍ಗೆ ಇಬ್ಬರ ಮೇಲೂ ಕೋಪವಿತ್ತು. ಆದರೆ ಓಡಿಹೋಗಿದ್ದವರು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ.

ಮದುವೆ ಬಳಿಕ ಆಗಸ್ಟ್ 12ರಂದು ಹನುಮಂತ ಸಂತೋಷನ ಕಣ್ಣಿಗೆ ಬಿದ್ದಿದ್ದನು. ಮೊದಲೇ ಕೋಪದಲ್ಲಿದ್ದ ಸಂತೋಷ್ ಸ್ನೇಹಿತನ ಜೊತೆ ಸೇರಿ ಹನುಮಂತನನ್ನು ಕೊಲೆ ಮಾಡಲು ಯತ್ನಿಸಿದ್ದನು. ಹನುಮಂತನನ್ನು ಚಾಕುವಿನಿಂದ ಸಂತೋಷ್ ಎದೆಗೆ ಇರಿಯಲು ಹೋದಾಗ, ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಬರದಲ್ಲಿ ಹನುಮಂತನ ಎಡಗೈ ಕಿರುಬೆರಳು ಕಟ್ ಆಗಿತ್ತು. ಆಗ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು.

ಈ ಬಗ್ಗೆ ಹನುಮಂತ ಪೊಲೀಸರಿಗೆ ದೂರು ನೀಡಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳಾದ ಸಂತೋಷ್ ಮತ್ತು ಪ್ರೇಮ್‍ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *