ಸ್ಕೂಟಿಗೆ KSRTC ಬಸ್ ಡಿಕ್ಕಿ- ಸ್ಥಳದಲ್ಲೇ ಅಕ್ಕ ತಮ್ಮ ದಾರುಣ ಸಾವು

ಚಿಕ್ಕಬಳ್ಳಾಪುರ: ಸ್ಕೂಟಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಕ್ಕ-ತಮ್ಮ ಇಬ್ಬರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜೆ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ.

35 ವರ್ಷದ ಭಾಗ್ಯಮ್ಮ ಹಾಗೂ 30 ವರ್ಷದ ಮುರುಳಿ ಮೃತ ದುರ್ದೈವಿಗಳು. ಮೃತ ಭಾಗ್ಯಮ್ಮ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಎಂದಿನಂತೆ ಇಂದು ಭಾಗ್ಯಮ್ಮ ಅವರನ್ನು ಸಹೋದರ ಸ್ಕೂಟಿಯಲ್ಲಿ ವಿಜಯಪುರ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ವಿರುದ್ಧ ದಿಕ್ಕಿನಿಂದ ಕೆಎಸ್‍ಆರ್‍ಟಿಸಿ ಬಸ್ ಬಂದಿದ್ದು, ರಸ್ತೆಯಲ್ಲಿ ಹಳ್ಳ ಇದೆ ಎಂದು ಚಾಲಕ ಎಡಗಡೆಯಿಂದ ಬಲಡೆಗೆ ವೇಗವಾಗಿ ಬಂದಿದ್ದಾನೆ. ಪರಿಣಾಮ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿಯಲ್ಲಿದ್ದ ಇಬ್ಬರೂ ರಸ್ತೆಯ ಪಕ್ಕಕ್ಕೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಕೂಟಿ ಸಂಪೂರ್ಣವಾಗಿ ಬಸ್ ನ ಕೆಳಭಾಗದಲ್ಲಿ ತೂರಿಕೊಂಡಿದೆ.

ಈ ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯ ಗ್ರಾಮಸ್ಥರು ಕೋಲಾರ-ವಿಜಯಪುರ-ಚಿಕ್ಕಬಳ್ಳಾಪುರ ಮಾರ್ಗದ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಬಸ್ ಚಾಲಕ ಪರಾರಿಯಾಗಿದ್ದಾನೆ.


Comments

Leave a Reply

Your email address will not be published. Required fields are marked *