ಸೇತುವೆಯಿಂದ ಕೆಳಗೆ ಉರುಳಿದ ಕಾರು – ಪ್ರಯಾಣಿಕರು ಪಾರು

ತುಮಕೂರು: ಚಲಿಸುತ್ತಿದ್ದ ಕಾರೊಂದು ಸೇತುವೆಯಿಂದ ಕೆಳಗೆ ಮಗುಚಿ ಕಾರಿನಲ್ಲಿದ್ದ ನಾಲ್ಕು ಜನ ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ.

ಗುಬ್ಬಿ ತಾಲೂಕಿನ ನಿಟ್ಟೂರುಬಳಿ ಈ ಘಟನೆ ನಡೆದಿದೆ. ತುಮಕೂರು ತಾಲೂಕಿನವರಾದ ಕಾರು ಪ್ರಯಾಣಿಕರು ತಿಪಟೂರು ಕಡೆಗೆ ತಮ್ಮ ಸಂಬಂಧಿಕರ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದರು.

ದಾರಿ ಮಧ್ಯೆ ನಿಟ್ಟೂರು ಬಳಿ ಎದುರಿಗೆ ಬಸ್ಸೊಂದು ಬಂದಿದೆ. ಬಸ್ಸಿನಿಂದ ಬಚಾವ್ ಆಗಲು ಹೋಗಿ ಚಾಲಕ ಕಾರನ್ನು ಎಡಕ್ಕೆ ಟರ್ನ್ ಮಾಡಿದ್ದಾನೆ. ಪರಿಣಾಮ ಕಾರು ಏಕಾಏಕಿ ಸೇತುವೆ ಕೆಳಗೆ ತಲೆ ಕೆಳಗಾಗಿ ಬಿದ್ದಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನರಿದ್ದು, ಎಲ್ಲರು ಜೋರಾಗಿ ಕೂಗಿಕೊಂಡಿದ್ದಾರೆ.

ಪ್ರಯಾಣಿಕರ ಕೂಗಾಟದ ಶಬ್ಧ ಕೇಳಿದ ತಕ್ಷಣ ಸ್ಥಳೀಯರು ಬಂದು ನಾಲ್ಕು ಜನರನ್ನು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ನಾಲ್ಕು ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಮಾಡಲಾಗಿದೆ. ಗುಬ್ಬಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *