ಮದ್ವೆ ಧಿರಿಸಿನಲ್ಲಿಯೇ ಬಂದು ಪರೀಕ್ಷೆ ಬರೆದ ವಧು!

ಮಂಡ್ಯ: ಮದುವೆ ದಿನವೇ ಮದುಮಗಳು ಪರೀಕ್ಷೆ ಬರೆದು ನಂತರ ತಾಳಿ ಕಟ್ಟಿಸಿಕೊಂಡಿರುವ ವಿಶೇಷ ಘಟನೆ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.

ಪಟ್ಟಣದ ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಓದುತ್ತಿದ್ದ ಕಾವ್ಯಾ ಅವರ ಮದುವೆ ಇಂದು ಲೋಹಿತ್ ಜೊತೆ ನಿಶ್ಚಯವಾಗಿತ್ತು. ಬೆಳಗ್ಗೆ 11 ಗಂಟೆಯಿಂದ 11:45 ರ ವರೆಗೆ ಮುಹೂರ್ತ ನಿಶ್ಚಯವಾಗಿತ್ತು. ಆದರೆ ಇಂದು ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಕೂಡ ಇತ್ತು.

ಮದುವೆ ಕಾರಣಕ್ಕೆ ಪರೀಕ್ಷೆಗೆ ತೊಂದರೆಯಾಗಬಾರದು ಎಂದು ನಿಶ್ಚಯಿಸಿದ ಗಂಡು ಮತ್ತು ಹೆಣ್ಣಿನ ಮನೆಯವರಿಬ್ಬರು ಕಾವ್ಯಾಳನ್ನು ಪ್ರೋತ್ಸಾಹಿಸಿ ಪರೀಕ್ಷೆ ಬರೆಯಲು ಕಳುಹಿಸಿದ್ದಾರೆ. ಮದುಮಗಳ ಅಲಂಕಾರದಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.

ಕಾವ್ಯಾ ಮುಹೂರ್ತದ ವೇಳೆಗೆ ಪರೀಕ್ಷಾ ಕೇಂದ್ರದಿಂದ ಹೊರಬಂದಿದ್ದಾರೆ. ತಕ್ಷಣ ಕಾವ್ಯಾ ಅವರನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಿ ಸಂಪ್ರದಾಯ ಬದ್ಧವಾಗಿ ವಿವಾಹ ಕಾರ್ಯ ನೆರವೇರಿಸಲಾಗಿದೆ.

ಮದುವೆ ದಿನವೂ ಹೆಣ್ಣುಮಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಕುಟುಂಬದವರು ಮತ್ತು ಮದುಮಗಳ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿ ಬರುತ್ತಿದೆ.

Comments

Leave a Reply

Your email address will not be published. Required fields are marked *