ಮದ್ವೆ ಮುಹೂರ್ತದ ದಿನವೇ ವಧು ನಾಪತ್ತೆ

ಚಿತ್ರದುರ್ಗ: ಮದುವೆ ಮುಹೂರ್ತದ ದಿನವೇ ವರನಿಗೆ ಕೈಕೊಟ್ಟು ವಧು ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮೇ 17 ರಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆಂಚಾಪುರದಲ್ಲಿ ವಿವಾಹ ನಡೆಯಬೇಕಿತ್ತು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚಿತ್ರದುರ್ಗದಲ್ಲಿ ನಿಶ್ಚಿತಾರ್ಥವಾಗಿತ್ತು. ಇದೀಗ ವಧು ಸ್ಫೂರ್ತಿ ಕೈಕೊಟ್ಟ ಹಿನ್ನೆಲೆಯಲ್ಲಿ ವರ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.

ವಧು ಸ್ಫೂರ್ತಿ ಸತತ ಮೂರು ತಿಂಗಳುಗಳ ಕಾಲ ವರನಾದ ನಾಗರಾಜ್ ಜೊತೆಗೆ ಎಲ್ಲೆಡೆ ಸುತ್ತಾಡುತ್ತಿದ್ದಳು. ಅಷ್ಟೇ ಅಲ್ಲದೇ ನಾಗರಾಜ್ ಅವರಿಂದ ಮೊಬೈಲ್, ಹಣ ಹಾಗೂ ಬಟ್ಟೆ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡಿದ್ದಳು. ಆದರೆ ವಧು ಮದುವೆ ದಿನವೇ ದಿಢೀರ್ ನಾಪತ್ತೆಯಾಗಿದ್ದಾಳೆ.

ಆಕೆಗೆ ತಾಳಿ ಕಟ್ಟಲು ಕಾಯುತ್ತಿದ್ದ ನಾಗರಾಜ್‍ಗೆ ದೊಡ್ಡ ಆಘಾತವಾಗಿದ್ದು, ಸ್ಫೂರ್ತಿ ಹುಡುಕಾಟಕ್ಕಾಗಿ ಹೊಳಲ್ಕೆರೆ ಪೊಲೀಸರ ಮೊರೆ ಹೋಗಿದ್ದಾರೆ. ಅಲ್ಲದೇ ಸ್ಫೂರ್ತಿಯಿಂದ ನಾಗರಾಜನಿಗಾದ ಅನ್ಯಾಯಕ್ಕೆ ಗ್ರಾಮಸ್ಥರು ಹಾಗೂ ನಾಗರಾಜನ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯುವತಿ ಇದೇ ರೀತಿ ಅನೇಕರಿಗೆ ವಂಚಿಸಿದ್ದಾಳೆಂಬ ಆರೋಪ ಕೇಳಿಬಂದಿದೆ.

ನಿಶ್ಚಿತಾರ್ಥ ಆದ ಬಳಿಕ ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದೆವು. ಚೆನ್ನಾಗಿ ಮಾತನಾಡುತ್ತಿದ್ದಳು. ಆದರೂ ನಾನು ನಿನಗೆ ಇಷ್ಟನಾ ಎಂದು ಕೇಳಿದ್ದೆ. ಆಗ ನನಗೆ ಇಷ್ಟ ಎಂದು ಹೇಳಿದ್ದಳು. ಆದರೆ ಒಂದು ದಿನ ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ಫೋನ್ ಮಾಡಿದ್ದೆ ರಿಸೀವ್ ಮಾಡಿರಲಿಲ್ಲ. ಕೊನೆಗೆ ನನ್ನ ಸ್ನೇಹಿತನ ನಂಬರ್ ನಿಂದ ಕರೆ ಮಾಡಿದಾಗ ರಿಸೀವ್ ಮಾಡಿ ಮಾತನಾಡಿದಳು. ನನಗೆ ನೀನು ಇಷ್ಟವಿಲ್ಲ. ನಾನು ಬೇರೆ ಹುಡುಗನನ್ನು ಪ್ರೀತಿ ಮಾಡುತ್ತಿದ್ದು, ಆತನೊಂದಿಗೆ ಬಂದಿದ್ದೇನೆ. ಮತ್ತೆ ಫೋನ್ ಮಾಡಿ ತೊಂದರೆ ಕೊಡಬೇಡ ಎಂದು ಹೇಳಿದ್ದಾಳೆ. ಈಗ ನನಗೆ ಮೋಸವಾಗಿದೆ. ಹುಡುಗರು ಮೋಸ ಮಾಡಿದ್ದರೆ ಬಿಡುತ್ತಿರಲಿಲ್ಲ. ಅದೇ ರೀತಿ ಈಗ ನನಗೆ ಮೋಸವಾಗಿದೆ ನ್ಯಾಯ ಬೇಕು ಎಂದು ವರ ನಾಗರಾಜು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *