ಮದ್ವೆಯಾದ ಮರುದಿನವೇ ವಧು ಎಸ್ಕೇಪ್ – ತಾನೂ ಮೂರನೆಯವನೆಂದು ವರನಿಗೆ ಶಾಕ್

ಭೋಪಾಲ್: ಮದುವೆಯಾದ ಮರುದಿನವೇ ವಧು ಹಣ, ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ಮಧ್ಯ ಪ್ರದೇಶ ಬುಂದೇಲ್‍ಖಂಡ್ ಪ್ರದೇಶದಲ್ಲಿ ನಡೆದಿದೆ.

ಚಟ್ಟರ್‍ಪುರ್ ಜಿಲ್ಲೆಯ ಸಣ್ಣ ವ್ಯಾಪಾರಿಯಾಗಿದ್ದ ಸುನೀಲ್ ಗುಪ್ತಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾಳೆ. ಇವರು ಆರೋಪಿಗೆ ಮೂರನೆಯ ಪತಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಸ್ವಪ್ನಾ ಎಂದು ಗುರುತಿಸಲಾಗಿದ್ದು, ಬುಂದೇಲ್‍ಖಂಡ್ ನಲ್ಲಿ ವಧುಗಳನ್ನು ಸಾಗಾಣೆ ಮಾಡುತ್ತಿದ್ದ ಗ್ಯಾಂಗ್‍ನನ್ನು ಪೊಲೀಸರು ಬಂಧಿಸಿದ ಬಳಿಕ ಸಪ್ನಾ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಚಟ್ಟರ್ಪುರ್ ಜಿಲ್ಲೆಯ ಕಿಶನ್‍ಗಡ್ ಗ್ರಾಮದಲ್ಲಿ ಸುನಿಲ್ ಗುಪ್ತಾ ಕೆಲಸ ಮಾಡುತ್ತಿದ್ದರು. ಅಲ್ಲಿ ಮದುವೆಯಾಗುವ ಬಗ್ಗೆ ಸ್ಥಳೀಯ ಚಂದುಗೆ ತಿಳಿಸಿದರು. ಚಂದು ಮತ್ತು ಆತನ ಸಹಚರ ಗೋಲು ಮತ್ತು ಮಧ್ಯವರ್ತಿಗಳು ಸೇರಿ ಸುನಿಲ್ ಗುಪ್ತಾಗೆ ಸಾಗರ್ ನಿವಾಸಿ ರಾಹುಲ್‍ ಪರಿಚಯಿಸಿದ್ದಾರೆ. ಆತ ಮದುವೆಯಾಗಬೇಕಾದರೆ 1 ಲಕ್ಷ ಹಣ ಕೊಡುವಂತೆ ಕೇಳಿದ್ದಾನೆ. ಆದರೆ ಸುನೀಲ್ 95 ಸಾವಿರ ರೂ. ಕೊಡುವುದಾಗಿ ಒಪ್ಪಿಕೊಂಡಿದ್ದು, ಕೊನೆಗೆ 95 ಸಾವಿರ ಕೊಟ್ಟು ಸ್ವಪ್ನಾ ಜೊತೆ ಮದುವೆಯಾಗಿದ್ದಾನೆ.

ರಾಹುಲ್ ಸ್ವಪ್ನಾಳನನ್ನು ತಂಗಿ ಎಂದು ಹೇಳಿಕೊಂಡು ಮಾರ್ಚ್ 4 ರಂದು ಮದುವೆ ಮಾಡಿಕೊಟ್ಟಿದ್ದಾನೆ. ಬಳಿಕ ಆ ದಿನ ಅಲ್ಲೇ ಉಳಿದುಕೊಂಡಿದ್ದು, ಮರುದಿನ ವರ ಎದ್ದು ನೋಡಿದಾಗ ಮನೆಯಲ್ಲಿದ್ದ ಹಣ, ಚಿನ್ನ ಎಲ್ಲವನ್ನು ದೋಚಿಕೊಂಡು ಸ್ವಪ್ನಾ ಮತ್ತು ರಾಹುಲ್ ಪರಾರಿಯಾಗಿದ್ದಾರೆ. ಇವರು ಮದುವೆಗೂ ಮೊದಲೇ ಸುನಿಲ್ ಕೊಟ್ಟ 95 ಸಾವಿರ ಹಣವನ್ನು ಹಂಚಿಕೊಂಡಿದ್ದರು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ದೇಶದಲ್ಲಿ 1,000 ಪುರುಷರಿಗೆ 940 ಮಹಿಳೆಯರ ರಾಷ್ಟ್ರೀಯ ಲಿಂಗ ಅನುಪಾತವಿದೆ. ಆದರೆ ಬುಂದೇಲ್‍ಖಂಡ ಪ್ರದೇಶದ ಸುತ್ತ ಮುತ್ತ ಲಿಂಗಾನುಪಾತ ತುಂಬ ಕಡಿಮೆ ಇರುವುದರಿಂದ ಮದುವೆಯಾಗಲು ಹೆಣ್ಣು ಸಿಗುತ್ತಿರಲಿಲ್ಲ. ಆದ್ದರಿಂದ ಕೆಲವು ಗುಂಪುಗಳು ಕಮಿಷನ್ ಪಡೆದು ಹೆಣ್ಣು ಹುಡುಕುವ ಕಾರ್ಯ ನಿರ್ವಹಿಸುತ್ತವೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಒಡಿಶಾದಿಂದ ಬುಂದೇಲ್‍ಖಂಡ್ ಗೆ ಮದುವೆಗಾಗಿ ಹೆಣ್ಣು ಮಕ್ಕಳನ್ನು ಸಾಗಣೆ ಮಾಡುತ್ತಿದ್ದಾರೆ.

ವರ ಸುನಿಲ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮಾಡಿದ ಪೊಲೀಸರು ಈ ಗ್ಯಾಂಗಿನ ಸದಸ್ಯರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಇನ್ನು ಇಬ್ಬರಿಗೆ ಮೋಸ ಮಾಡಿದ್ದರು ಎಂಬ ಸಂಗತಿ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಒಟ್ಟು 3 ಲಕ್ಷ ಮೌಲ್ಯದ ನಗದು, ಚಿನ್ನ ಮತ್ತು ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದರು.

Comments

Leave a Reply

Your email address will not be published. Required fields are marked *