ಸೆಕ್ಸ್ ನಂತ್ರ 500 ರೂ. ಕೇಳಿದ ಪ್ರೇಯಸಿಯನ್ನೇ ಕೊಂದ

ರಾಯ್‍ಪುರ: ದೈಹಿಕ ಸಂಬಂಧ ಬೆಳೆಸಿದ ನಂತರ 500 ರೂ. ಕೇಳಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನೇ ಕೊಂದ ಘಟನೆ ಛತ್ತಿಸ್‍ಗಢದ ಕೊರ್ಬಾದಲ್ಲಿ ನಡದಿದೆ.

ಚಂದ್ರವಿಜಯ್ ಕೊಲೆ ಮಾಡಿದ ಆರೋಪಿ. ಇಂದ್ರ ದೇವಿ ಭಾರದ್ವಾಜ್ (40) ಜೊತೆ ಆರೋಪಿ ಚಂದ್ರವಿಜಯ್ ಅಕ್ರಮ ಸಂಬಂಧ ಹೊಂದಿದ್ದನು. ಡಿಸೆಂಬರ್ 9ರ ರಾತ್ರಿ ಇಂದ್ರ ದೇವಿಯ ಶವ ಜಮೀನಿನಲ್ಲಿ ಪತ್ತೆಯಾಗಿತ್ತು. ಕೊಲೆಯನ್ನು ಅಪಘಾತವಾಗಿ ಬಿಂಬಸಲು ಚಂದ್ರವಿಜಯ್ ಕತ್ತು ಹಿಸುಕಿ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಇಂದ್ರ ಹಾಗೂ ಚಂದ್ರವಿಜಯ್ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದರು.

ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಮಹಿಳೆಯ ಶವ ಆಕೆಯ ಮನೆಯಿಂದ ಸುಮಾರು 70 ಮೀ. ದೂರದಲ್ಲಿರುವ ಜಮೀನಿನಲ್ಲಿ ಪತ್ತೆಯಾಗಿತ್ತು. ಮಹಿಳೆಯ ಮಗ ಮನೆಗೆ ಬಂದಾಗ ತಾಯಿ ಎಲ್ಲಿಯೂ ಕಾಣಿಸಲಿಲ್ಲ. ಆಗ ಆತ ತನ್ನ ತಾಯಿಯನ್ನು ಹುಡುಕಲು ಶುರು ಮಾಡಿದ್ದನು. ಈ ವೇಳೆ ಜಮೀನಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ತಕ್ಷಣ ಆತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದನು. ಆಗ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ವೇಳೆ ಡಾಗ್ ಸ್ಕ್ವಾಡ್ ಚಂದ್ರವಿಜಯ್ ಮನೆಗೆ ತಲುಪಿತ್ತು. ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಾನು ಹಾಗೂ ಇಂದ್ರ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದೇವೆ. ಘಟನೆಯ ದಿನ ಇಂದ್ರ ನನ್ನನ್ನು ಜಮೀನಿಗೆ ಕರೆದಿದ್ದಳು. ಅಲ್ಲಿ ನಾವಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದೆವು. ಬಳಿಕ ಆಕೆ ನನಗೆ 500 ರೂ. ಕೇಳಿದ್ದಳು. ಆದರೆ ನಾನು ಕೊಡಲು ನಿರಾಕರಿಸಿದೆ ಎಂದು ಆರೋಪಿ ಪೊಲೀಸರ ಬಳಿ ತಿಳಿಸಿದ್ದಾನೆ.

ನಾನು ಹಣ ಕೊಡಲು ನಿರಾಕರಿಸಿದ್ದಕ್ಕೆ ಇಂದ್ರ ಜೋರಾಗಿ ಕಿರುಚಾಡಲು ಶುರು ಮಾಡಿದ್ದಳು. ಅಲ್ಲದೆ ನಾವಿಬ್ಬರು ಅಕ್ರಮ ಸಂಬಂಧ ಹೊಂದಿರುವ ವಿಷಯವನ್ನು ಪೋಷಕರಿಗೆ ತಿಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಆಕೆಯ ಕಿರುಚಾಟ ಕೇಳಿ ಕೋಪದಿಂದ ಕತ್ತು ಹಿಸುಕಿದೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದೆ ಎಂದು ಚಂದ್ರವಿಜಯ್ ಹೇಳಿದ್ದಾನೆ. ಸದ್ಯ ಪೊಲೀಸರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *