ಗ್ಯಾಸ್ ಬಲೂನ್ ಸ್ಫೋಟ: ಗಾಯಗೊಂಡಿದ್ದ ಬಾಲಕನಿಗೆ ನೆರವು ನೀಡ್ತೀವಿ ಅಂತ ಮರೆತೇ ಬಿಟ್ರು ರಾಜಕಾರಣಿಗಳು!

ಮಂಡ್ಯ: ರಾಜಕಾರಣಿಗಳ ಪ್ರಚಾರದ ಭರಾಟೆಗೆ ಬಾಲಕನೊಬ್ಬನ ಬದುಕು ಬರಡಾಗಿದೆ. ತೀವ್ರ ಕಡು ಬಡುತನದಲ್ಲಿರೋ ಈ ಕುಟುಂಬ ಈಗ ಗಾಯಾಳು ಬಾಲಕನನ್ನು ಉಳಿಸಿಕೊಳ್ಳಲು ಪರದಾಡ್ತಿದೆ. ನೆರವಿನ ಹಸ್ತ ನೀಡ್ತೀವಿ ಅಂದಿದ್ದ ರಾಜಕಾರಣಿಗಳು ಇದೀಗ ಈ ಬಾಲಕನನ್ನು ಮರೆತೇ ಬಿಟ್ಟಿದ್ದಾರೆ.

ಹೌದು. ಮಾರ್ಚ್ 23 ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಂತೆ ಮೈದಾನದಲ್ಲಿ ರಾಹುಲ್ ಗಾಂಧಿ ಸ್ವಾಗತಕ್ಕಾಗಿ ಹಾಕಲಾಗುತ್ತಿದ್ದ ಗ್ಯಾಸ್ ಬಲೂನ್ ಸ್ಫೋಟಗೊಂಡಿತ್ತು. ಈ ಪ್ರಕರಣದಲ್ಲಿ ಸುಮಾರು 11 ಮಕ್ಕಳು ಗಾಯಗೊಂಡಿದ್ದರು. ಅದರಲ್ಲಿ ಸಂತೆ ಮಾಳದ ಸ್ಲಂ ನಿವಾಸಿ ಕುಮಾರ್ ಎಂಬವರ ಮಗ ಮಾದೇಶ್ ಅನ್ನೋ ಬಾಲಕ ಈಗಲೂ ತೀವ್ರ ಸುಟ್ಟಗಾಯಗಳಿಂದ ನರಳಾಡ್ತಿದ್ದಾನೆ.

ಭಾಗ್ಯಮ್ಮ, ಬಾಲಕನ ತಾಯಿ

ಘಟನೆಯಾದಾಗ ಈತನ ಆಸ್ಪತ್ರೆ ಖರ್ಚು ವೆಚ್ಚ ನೋಡಿಕೊಂಡ ರಾಜಕಾರಣಿ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಇದೀಗ ಚುನಾವಣೆ ಸೋತ ಬಳಿಕ ಮರೆತೇ ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಪಕ್ಷದ ವತಿಯಿಂದ 25 ಸಾವಿರ ಪರಿಹಾರ ಘೋಷಣೆ ಮಾಡಿದ್ರು. ಆದ್ರೆ ಬಾಲಕನ ಚಿಕಿತ್ಸೆಗೆ ಪ್ರತಿ ತಿಂಗಳು ಕನಿಷ್ಟ 20 ಸಾವಿರ ಖರ್ಚಾಗುತ್ತಿದೆ. ಶೇಕಡ 80 ರಷ್ಟು ಸುಟ್ಟ ಗಾಯವಾಗಿರೋ ಈ ಬಾಲಕನನ್ನು ಉಳಿಸಿಕೊಳ್ಳಲು ಪೋಷಕರು ಪರದಾಡುತ್ತಿದ್ದು, ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ. ಹೀಗಾಗಿ ಆರ್ಥಿಕ ನೆರವಿಗೆ ಕೈ ಚಾಚುತ್ತಿದ್ದಾರೆ.

ತೀರಾ ಬಡತದಲ್ಲಿರೋ ಈ ಕುಟುಂಬ ಕೂಲಿ ನಾಲಿಮಾಡಿ ಹೇಗೋ ಚಿಕ್ಕ ಮನೆಯಲ್ಲಿ ಜೀವನ ನಡೆಸ್ತಿದ್ರು. ಘಟನೆಯ ನಂತರ ಈ ಕುಟುಂಬದ ಸ್ಥಿತಿ ಹೇಳತೀರದಾಗಿದೆ. ಇತ್ತ ಗಾಯಾಳು ಮಗನ ಚಿಕಿತ್ಸಾ ವೆಚ್ಚಕ್ಕೆ ತಂದೆ ಕೂಲಿಕೆಲಸ ಮಾಡುತ್ತಿದ್ರೆ, ಪತ್ನಿ ಸದಾ ಮಲಗಿದ ಸ್ಥಿತಿಯಲ್ಲಿ ಸುಟ್ಟ ಗಾಯದೊಂದಿಗೆ ನರಳಾಡ್ತಿರೋ ಬಾಲಕನನ್ನು ಆರೈಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಜಕಾರಣಿಗಳ ಪ್ರಚಾರದ ಭರಾಟೆಗೆ ಬಾಲಕನ ಬದುಕು ಮಾತ್ರ ಶೋಚನೀಯವಾಗಿದೆ. ಬಾಲಕ ಶಾಲೆಗೆ ಹೋಗಲೂ ಆಗದೇ ವಿದ್ಯಾಭ್ಯಾಸ ಕುಂಠಿತವಾಗಿದೆ.

Comments

Leave a Reply

Your email address will not be published. Required fields are marked *