ಗಾಳಿಪಟ ಹಾರಿಸುವ ಜಿದ್ದಿಗೆ ಬಿದ್ದು ಬಾಲಕನ ಪ್ರಾಣವೇ ಹೋಯ್ತು!

ಹುಬ್ಬಳ್ಳಿ: ಗಾಳಿಪಟ ಹಾರಿಸಲು ಹೋಗಿ ಬಾಲಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಮನಕಲಕುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸಾಗರ್ ಜಾಲಗಾರ್(14) ಮೃತ ದುರ್ದೈವಿ. ದಸರಾ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಸಾಗರ್ ತನ್ನ ಸ್ನೇಹಿತರೊಂದಿಗೆ ಗಾಳಿ ಪಟ ಹಾರಿಸಲು ಹೋಗಿದ್ದನು. ಈ ವೇಳೆ ಗಾಳಿಪಟ ಹಾರಿಸುತ್ತಾ ರೈಲ್ವೇ ಟ್ರ್ಯಾಕ್ ಪಕ್ಕ ಹೋಗಿದ್ದ ಸಾಗರ್, ತನ್ನ ಸ್ನೇಹಿತರಿಗಿಂತಲೂ ತನ್ನ ಗಾಳಿಪಟವನ್ನ ಮುಗಿಲೆತ್ತರಕ್ಕೆ ಹಾರಿಸುವ ಜಿದ್ದಿಗೆ ಬಿದ್ದಿದ್ದನು. ರೈಲ್ವೆ ಟ್ರ್ಯಾಕನ್ನೂ ಲೆಕ್ಕಿಸದೇ ಗಾಳಿಪಟ ಹಾರಿಸುವುದರಲ್ಲಿ ನಿರತನಾಗಿದ್ದನು.

ಸಾಗರ್ ಗೆ ತಾನು ಟ್ರ್ಯಾಕ್ ಮೇಲಿದ್ದೀನಿ ಅನ್ನುವ ಅರಿವು ಇರಲಿಲ್ಲ. ಅವನ ಗಮನಕ್ಕೆ ಬರುವ ಹೊತ್ತಿಗೆ ಸಮಯ ಕೈಮೀರಿ ಹೋಗಿತ್ತು. ಏಕೆಂದರೆ ಅದೇ ಸಮಯಕ್ಕೆ ರೈಲ್ ಸಾಗರ್ ನ ಮೇಲೆ ಹಾದುಹೋಗಿತ್ತು. ಹೀಗಾಗಿ ಸಾಗರ್ ತನ್ನ ಎರಡೂ ಕಾಲು ಕಳೆದುಕೊಂಡಿದ್ದು, ತಕ್ಷಣವೇ ಕಿಮ್ಸ್ ಆಸ್ಪತ್ರೆ ಸೇರಿಸಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಮೃತ ಬಾಲಕನ ಸಂಬಂಧಿ ಟಾಕಪ್ಪಾ ತಿಳಿಸಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯ ಉಣಕಲ್ ನ ಗಿರಿರಾಜ್ ನಗರ ನಿವಾಸಿಗಳದಾ ಕೃಷ್ಣ ಹಾಗೂ ಲಕ್ಷ್ಮೀ ದಂಪತಿಯ ಏಕೈಕ ಪುತ್ರ ಈ ಸಾಗರ್. ಹೆಣ್ಣು ಮಕ್ಕಳಿದ್ದು, ಇದ್ದೊಬ್ಬ ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ತಂದೆ-ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. ಆದರೆ ಜೀವನಕ್ಕೆ ಆಧಾರವಾಗಬೇಕಿದ್ದ ಮಗ ಮಸಣ ಸೇರಿದ್ದಾನೆ ಎಂದು ಮೃತ ಸಂಬಂಧಿ ಶ್ರೀಧರ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *