ವೈದ್ಯನ ಚುಚ್ಚುಮದ್ದಿಗೆ ಬಾಲಕ ಬಲಿ!

ಹಾವೇರಿ: ವೈದ್ಯನೊಬ್ಬ ನೀಡಿದ್ದ ಚುಚ್ಚುಮದ್ದಿನಿಂದ ಆರೋಗ್ಯದಲ್ಲಿ ಏರುಪೇರಾಗಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊಸಳ್ಳಿ ಗ್ರಾಮದ ಹರೀಶ್ ದುರುಗಣ್ಣನವರ್ (13) ಮೃತ ಬಾಲಕ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಹರೀಶ್‍ನನ್ನು ಪೋಷಕರು ಅದೇ ಗ್ರಾಮದ ಪರಮೇಶ್ ಎಂಬ ವೈದ್ಯನ ಬಳಿ ಸೆಪ್ಟೆಂಬರ್ 8 ರಂದು ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆಯ ಬಳಿಕವು ಬಾಲಕ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಅಲ್ಲದೇ ಇಂಜೆಕ್ಷನ್ ನೀಡಿದ ಜಾಗದಲ್ಲಿ ಗಡ್ಡೆಯಾಗಿತ್ತು. ಇದನ್ನು ಗಮನಿಸಿದ ಪೋಷಕರು ಮತ್ತೊಮ್ಮೆ ವೈದ್ಯನ ಬಳಿ ತೋರಿಸಿದ್ದರು. ಈ ವೇಳೆ ಗಡ್ಡೆಯನ್ನು ಪರೀಕ್ಷಿಸಿದ ವೈದ್ಯ ಮತ್ತೊಂದು ಇಂಜೆಕ್ಷನ್ ನೀಡಿದ್ದ. ಇದಾದ ಬಳಿಕ ಸೋಮವಾರ ರಾತ್ರಿ ಬಾಲಕ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ.

ಕೂಡಲೇ ಪೋಷಕರು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ. ಬಾಲಕ ಸಾವಿಗೆ ವೈದ್ಯನ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ. ಬಾಲಕ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ವೈದ್ಯ ಪರಮೇಶ್ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *