ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಹುಟ್ಟುಹಬ್ಬದಂದೇ ಪ್ರಾಣಬಿಟ್ಟ ಬಾಲಕ!

ಚಾಮರಾಜನಗರ: ಹುಟ್ಟುಹಬ್ಬ ದಿನದಂದು ಸುಳ್ವಾಡಿ ಮಾರಮ್ಮ ದೇವಿಯ ದರ್ಶನ ಪಡೆಯಲು ಹೋಗಿದ್ದ ಪುಟ್ಟ ಬಾಲಕನೊಬ್ಬ ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಮೃತಪಟ್ಟಿದ್ದಾನೆ.

ಬಿದರಿಹಳ್ಳಿಯ ಪ್ರೀತಂ (12) ಮೃತ ಬಾಲಕ. ಕೆಲವೊಬ್ಬರು ತಮ್ಮ ಜನ್ಮದಿನದಂದು ಕುಟುಂಬ ಸಮೇತ, ಇಲ್ಲವೇ ಒಬ್ಬರೇ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಆರೋಗ್ಯ, ಆಯಸ್ಸು ನೀಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹಾಗೆಯೇ ನಿನ್ನೆಯಷ್ಟೇ 12ನೇ ವರ್ಷಕ್ಕೆ ಕಾಲಿಟ್ಟಿದ್ದ ಪ್ರೀತಂ ಕೂಡ ಮಾರಮ್ಮ ದೇವಿ ದೇವಸ್ಥಾನಕ್ಕೆ ಹೋಗಿದ್ದನು. ಜನ್ಮದಿನ ಆಚರಿಸಿಕೊಂಡು ಖುಷಿ ಖುಷಿಯಾಗಿದ್ದ ಬಾಲಕ, ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿಬಿಟ್ಟ. ದೇವರ ಪ್ರಸಾದ ಬಾಲಕನ ಜೀವಕ್ಕೆ ಕುತ್ತು ತಂದುಬಿಟ್ಟಿತು.

ದೇವಿ ದರ್ಶನಕ್ಕೆ ಹೋಗಿದ್ದ ಪ್ರೀತಂಗೆ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಯಾರಿಸಿದ್ದ ಪ್ರಸಾದ (ತರಕಾರಿ ಬಾತ್)ವನ್ನು ಸೇವಿಸಿದ್ದಾನೆ. ವಾಸನೆ ಬಂದಿದ್ದರೂ ಪುಟ್ಟ ಬಾಲಕ ಅದನ್ನು ಎಸೆಯಬಾರದು ಅಂತ ಸೇವಿಸಿದ್ದಾನೆ. ಪರಿಣಾಮ ಆತನಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಂ ಸಾವನ್ನಪ್ಪಿದ್ದಾನೆ.

ಮೃತ ದೇಹವನ್ನು ಆಸ್ಪತ್ರೆಯಿಂದ ಹೊರಗೆ ತರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗ ಸಾವು ಕಣ್ಣಾರೆ ಕಂಡ ತಾಯಿ ತಂದೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು. ಜನ್ಮ ದಿನದಂದೇ ಪ್ರಾಣ ಬಿಟ್ಟೆಲ್ಲೋ ಅಂತಾ ಪ್ರೀತಂ ಮೃತದೇಹ ಹಿಡಿದು ತಾಯಿ ಅಳುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರದಿದ್ದ ಜನರ ಕಣ್ಣಲ್ಲಿ ನೀರು ತರಿಸುವಂತಿತ್ತು.

ಪ್ರೀತಂ ತಾಯಿಯ ಕಥೆ ಒಂದು ರೀತಿಯಾದರೆ 15 ವರ್ಷ ಮಕ್ಕಳಾಗದೆ ಓಂ ಶಕ್ತಿಗೆ ಹರಕೆ ಹೊತ್ತು ಪಡೆದುಕೊಂಡ ಮಗುವನ್ನು ಕಳೆದುಕೊಂಡ ತಾಯಿಯ ದುಃಖ ಮುಗಿಲು ಮುಟ್ಟಿತ್ತು. ಶಾಂತರಾಜು ದಂಪತಿಯ ಮಗನ ಸಾವಿಗೆ ಕಣ್ಣೀರಿಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *