ಭೂತ ಹಿಡಿಯಲು ಪೊಲೀಸರನ್ನ ಕರೆಸಿದ ಯುವಕ

ಲಕ್ನೋ: ಯುವಕನೋರ್ವ ಭೂತವನ್ನು ಹಿಡಿಯಲು ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಲವಾರಿ ಮಾಫಿ ಮಡಿಯಾನ್‍ನಲ್ಲಿ ನಡೆದಿದೆ.

100 ನಂಬರ್ ಗೆ ಕರೆ ಮಾಡಿದ ಯುವಕ ಆನಂದ್ ಪಟೇಲ್ ತನ್ನ ತಂಗಿಯನ್ನು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದನು. ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಸೋದರಿಯನ್ನು ಭೂತದಿಂದ ಬಿಡುಗಡೆಗೊಳಿಸಬೇಕೆಂದು ಹೇಳಿಕೊಂಡಿದ್ದಾನೆ. ಕರೆಯಿಂದ ಮಾಹಿತಿ ಪಡೆದ ಪೊಲೀಸರು ಯುವಕನ ಮನೆಗೆ ತೆರಳಿದ್ದಾರೆ. ನನ್ನ ಸೋದರಿಯ ಮೇಲೆ ಬಂದ ಓರ್ವ (ಭೂತ) ಕಳೆದ ಕೆಲ ದಿನಗಳಿಂದ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಸೋದರಿಯನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾನೆ.

ಈ ಕುರಿತು ಪೊಲೀಸರು ಆನಂದ್ ತಂದೆಯನ್ನು ಸಂಪರ್ಕಿಸಿದ್ದಾರೆ. ಪುತ್ರ ಮನೆಯಲ್ಲಿ ಯಾರಿಗೂ ತಿಳಿಸದೇ ಕರೆ ಮಾಡಿದ್ದಾನೆ. ನಾವು ಆತನಿಗೆ ತಿಳಿ ಹೇಳುತ್ತೇವೆ ಎಂದಿದ್ದಾರೆ. ಪೊಲೀಸರು ಸಹ ಯುವಕನನ್ನು ಕರೆಸಿ ಸೋದರಿಯ ಆರೋಗ್ಯಸ್ಥಿತಿಯನ್ನು ಆನಂದ್‍ನಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.

ನನ್ನ ಸೋದರಿಯನ್ನು ಆವರಿಸಿಕೊಂಡಿರುವ ಯುವಕನ ಜೊತೆ ನಾನು ಮಾತನಾಡಿದೆ. ತಂಗಿಯನ್ನು ಬಿಟ್ಟು ಹೋಗುವಂತೆ ಅವನ ಬಳಿ ಪ್ರಾರ್ಥನೆ ಮಾಡಿಕೊಂಡ್ರೂ ಆತ ಹೋಗಲಿಲ್ಲ. ಹಾಗಾಗಿ ಸೋದರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಪೊಲೀಸರಿಗೆ ಕರೆ ಮಾಡಿದೆ ಎಂದು ಆನಂದ್ ಪಟೇಲ್ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *