ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿ – ಮೂವರು ಗಂಭೀರ

ಬೆಂಗಳೂರು: ವೈಕುಂಠ ಏಕಾದಶಿಯಂಥ ಒಳ್ಳೆಯ ದಿನದಂದೇ ಬಿಎಂಟಿಸಿಗೆ ಇಬ್ಬರು ಬಲಿಯಾದ್ರೆ, ಮೂವರು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.

ಬೈಲಪ್ಪ(42) ಹಾಗು ವಿಶ್ವಾರಾಧ್ಯ ಸಾವನ್ನಪ್ಪಿದ ವಾಹನ ಸವಾರರು. ಬೆಳಗ್ಗೆ 8-30ರ ಸುಮಾರಿಗೆ ಕನ್ನಲ್ಲಿ ಡಿಪೋಗೆ ಸೇರಿದ 245ಎಂ ಬಸ್ ವಡ್ಡರಹಳ್ಳಿಯಿಂದ ಮೆಜೆಸ್ಟಿಕ್ ಕಡೆ ಹೊರಟಿತ್ತು. ಕೊಟ್ಟಿಗೆಪಾಳ್ಯ ಡೌನ್ ನಲ್ಲಿ ಬ್ರೇಕ್ ಫೈಲ್ಯೂರ್ ಆಗಿದೆ. ಬಸ್ ಬ್ರೇಕ್ ಫೈಲ್ಯೂರ್ ಆಗಿ ನಾಲ್ಕು ದ್ವಿಚಕ್ರ ವಾಹನಗಳು, ಒಂದು ಕಾರ್ ಗೆ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ವಾಹನಗಳು ಸಂಪೂರ್ಣ ಜಖಂ ಆಗಿವೆ. ಬಿಎಂಟಿಸಿ ಚಾಲಕ ವೆಂಕಟೇಶ್ ಸಮಯಪ್ರಜ್ಞೆ ಮೆರೆದಿದ್ದಾರೆ. ರಸ್ತೆಯ ಎಡಬದಿಯಲ್ಲಿ ಬಸ್ ಸ್ಟಾಪ್ ಇದ್ದು, ಸಾಕಷ್ಟು ಜನ ನಿಂತಿದ್ದರು. ಬಲಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳಿಗೆ ಬಸ್ಸು ನುಗ್ಗಿಸಿ ನಿಲ್ಲಿಸಿದ್ದಾರೆ.

ವಾಹನ ಸವಾರರ ಮೇಲೆ ಹರಿದ ಪರಿಣಾಮ ಹರ್ಷಿತ್, ನಾಗರಾಜ್ ಮತ್ತು ಅಭಿಷೇಕ್ ಗೆ ಗಂಭೀರ ಗಾಯಗಳಾಗಿ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿಲ್ಲಿದ್ದ ಪ್ರಯಾಣಿಕರು, ಎಮರ್ಜೆನ್ಸಿ ಎಕ್ಸಿಟ್‍ನಿಂದ ಹೊರಬಂದಿದ್ದಾರೆ.

ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಇಬ್ಬರು ಸಾವನ್ನಪ್ಪಿದ್ರೆ, ಮೂವರಿಗೆ ತಲೆಗೆ ಗಾಯವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *