ಇದು ರಾಮನಗರ, ಹಾಸನದ ಅಣ್ಣ-ತಮ್ಮನ ಬಜೆಟ್: ಬಿಎಸ್‍ವೈ ವ್ಯಂಗ್ಯ

ಬೆಂಗಳೂರು: ದೋಸ್ತಿ ಬಜೆಟ್ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಇದು ರಾಮನಗರ ಹಾಗೂ ಹಾಸನದ ಅಣ್ಣ ತಮ್ಮಂದಿರ ಬಜೆಟ್ ಎಂದು ವ್ಯಂಗ್ಯ ಮಾಡಿದರು.

ನಾಡಿನ ರೈತ ಸಮುದಾಯಕ್ಕೆ ಸಿಎಂ ಕುಮಾರಸ್ವಾಮಿ ದ್ರೋಹ ಮಾಡಿದ್ದಾರೆ. ನೀವು 34 ಸಾವಿರ ಕೋಟಿ ಮನ್ನಾ ಮಾಡುತ್ತೇವೆ ಅಂತಾ ಹೇಳಿದ್ರೂ, ಹಣಕಾಸಿನ ಹೊಂದಾಣಿಕೆ ಎಲ್ಲಿ ಮಾಡಿದ್ದೀರಿ. ಸುಸ್ತಿ ಸಾಲ ಬಗ್ಗೆ ಮಾತ್ರ ಮಾತನಾಡಿದ್ದಾರೆ ಅಂತಾ ಆರೋಪಿದ್ರು.

ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಏರಿಕೆ ಮಾಡಿ ರೈತ ಶ್ರೀಸಾಮಾನ್ಯನ ಮೇಲೆ ಬರೆ ಎಳೆದಿದ್ದಾರೆ. ಸಿಎಂ ರಾಜಕೀಯ ದೊಂಬರಾಟ ಮಾಡಿದ್ದಾರೆ. ಇದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ ಎಂದರು. ಬಜೆಟ್‍ನಲ್ಲಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿಗೆ ಅನ್ಯಾಯವಾಗಿದೆ. ಈ ಬಜೆಟ್ ರಾಮನಗರ, ಹಾಸನ ಅಣ್ಣ ತಮ್ಮಂದಿರ ಬಜೆಟ್. ಇದಕ್ಕಾಗಿ ಇವರನ್ನ ಸಿಎಂ ಮಾಡಿದ್ರಾ..? ಇದಕ್ಕೆ ಸಿಎಂ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಬಜೆಟ್ ಬಗ್ಗೆ ಸದನದಲ್ಲಿ ಚರ್ಚೆಗಳಾಗುತ್ತದೆ. ಇದಾದ ಬಳಿಕ ರಾಜ್ಯದ ಉದ್ದಗಲಕ್ಕೂ ಹೋಗುತ್ತೇವೆ. ನಾನು ರಾಜ್ಯದ ಜನರಿಗೆ ಈ ಬಜೆಟ್ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡುತ್ತೇನೆ. ಎಚ್‍ಡಿಕೆ ಅವರು ಎಲ್ಲೂ 34 ಸಾವಿರ ಕೋಟಿ ರೂಪಾಯಿ ಎಲ್ಲಿಂದ ತರುತ್ತಾರೆ ಎಂದು ಹೇಳಿಲ್ಲ. ಅನ್ನಭಾಗ್ಯ ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಇಳಿಕೆ ಮಾಡಿದ್ದೀರಿ. ವೃದ್ಧಾಪ್ಯ ವೇತನ 6 ಸಾವಿರ ಕೊಡುತ್ತೇನೆ ಎಂದು ಈಗ 600 ರಿಂದ 1000 ರೂ.ಗೆ ಏರಿಸಿದ್ದೀರಿ. ಇದು ನಿಮ್ಮ ಸಾಧನೇನಾ ಎಂದು ಪ್ರಶ್ನಿಸಿದರು.

ಅಲ್ಲದೆ ಸಿಎಂ ಮೀನುಗಾರರ ಸಾಲ ಮನ್ನಾ ಮಾಡಿಲ್ಲ. ಇದನ್ನ ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು ಅಂತಾ ಕರೆ ನೀಡಿದರು.

Comments

Leave a Reply

Your email address will not be published. Required fields are marked *