ರಾಜ್ಯದ ಚಿದಂಬರ ರಹಸ್ಯ ಹೊರಬಿತ್ತು, ಶೀಘ್ರವೇ ಚಿದಂಬರಂ ರಹಸ್ಯವೂ ತಿಳಿಯುತ್ತೆ: ಪ್ರಹ್ಲಾದ್ ಜೋಶಿ

ಧಾರವಾಡ: ರಾಜ್ಯದಲ್ಲಿ ಮೈತ್ರಿ ಸರ್ಕಾರದ ಚಿದಂಬರ ರಹಸ್ಯ ಹೊರಬಿದ್ದಿದೆ. ಶೀಘ್ರದಲ್ಲಿ ಮಾಜಿ ಸಚಿವ ಪಿ.ಚಿದಂಬರಂ ಅವರ ರಹಸ್ಯ ಹೊರ ಬೀಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ಸನ್ನು ಕುಟುಕಿದ್ದಾರೆ.

ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿದ್ದಾರೆ. ಹೀಗಾಗಿ ರಾಜ್ಯ ಮಟ್ಟದಲ್ಲಿ ಚಿದಂಬರ ರಹಸ್ಯ ಹೊರಬಿದ್ದಿವೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದ ಚಿದಂಬರ ರಹಸ್ಯ ಶೀಘ್ರದಲ್ಲಿಯೇ ಹೊರ ಬೀಳಲಿದೆ ಎಂದು ಲೇವಡಿ ಮಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವಗೌಡ ಅವರ ಮಧ್ಯದ ಆರೋಪ ಪ್ರತ್ಯಾರೋಪದಿಂದ ಸತ್ಯ ಸಂಗತಿ ಈಗ ಹೊರಗೆ ಬಂದಿದೆ. ನಾವು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯ ಮಾಡಿಲ್ಲ ಅಂತ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಮೈತ್ರಿ ನಾಯಕರ ವಾಗ್ದಾಳಿಯಿಂದ ಈಗ ಅದು ಸ್ಪಷ್ಟಗೊಳ್ಳುತ್ತಿದೆ ಎಂದು ಹೇಳಿದರು.

ರಾಜ್ಯದ ಜನರಿಗೆ ಉತ್ತಮ ಸರ್ಕಾರ ಕೊಡುವುದು ಮಾತ್ರ ನಮ್ಮ ಮುಂದಿರುವ ಜವಾಬ್ದಾರಿ. ಆ ಕೆಲಸವನ್ನು ಬಿ.ಎಸ್.ಯಡಿಯೂರಪ್ಪ ಅವರು ಮಾಡುತ್ತಾರೆ ಎಂಬ ನಂಬಿಕೆ ಇದೆ. ತಮ್ಮ ಆಡಳಿತದ ವೇಳೆ ಕಾಂಗ್ರೆಸ್-ಜೆಡಿಎಸ್ ನಾಯಕರು ಒಳಗೊಳಗೆ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಹೊರಗೆ ಮತ್ತು ನಾವು ಒಗ್ಗಟ್ಟಾಗಿದ್ದೇವೆ ಅಂತಾ ತೋರಿಸಿಕೊಳ್ಳುತ್ತಿದ್ದರು.

Comments

Leave a Reply

Your email address will not be published. Required fields are marked *