ಜೈಲಿಂದ ಬಂದ್ಮೇಲೆ ಡಿಕೆಶಿ ಬುದ್ಧಿ ಸ್ಥಿಮಿತದಲ್ಲಿಲ್ಲ: ಸಂಸದ ಶ್ರೀನಿವಾಸ್ ಪ್ರಸಾದ್

– ಸೋತವರು, ಸತ್ತವರಿ ಮಂತ್ರಿಗಿರಿ ಇಲ್ಲ
– ವಿಶ್ವನಾಥ್‍ಗೆ ಶ್ರೀನಿವಾಸ್ ಪ್ರಸಾದ್ ಟಾಂಗ್

ಚಾಮರಾಜನಗರ: ಮಾಜಿ ಸಚಿವ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ಬಳಿಕ ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಯೇಸು ಪ್ರತಿಮೆ ನಿರ್ಮಾಣ ಕುರಿತು ಕೊಳ್ಳೇಗಾಲದಲ್ಲಿ ಮಾತನಾಡಿದ ಸಂಸದರು, ಡಿ.ಕೆ.ಶಿವಕುಮಾರ್ ಅವರು ನೀಡುತ್ತಿರುವ ಹೇಳಿಕೆಗಳಿಗೆ ಹಾಗೂ ಪ್ರತಿಮೆ ನಿರ್ಮಾಣದ ವಿಷಯಕ್ಕೆ ಸಂಬಂಧವೇ ಇಲ್ಲವಾಗಿದೆ. ಸಚಿವರು ಏನು ಹೇಳಲು ಹೊರಟಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ದೇಶಾದ್ಯಂತ ಹಬ್ಬಿರುವ ಪೌರತ್ವ ತಿದ್ದುಪಡೆ ಕಾಯ್ದೆ ಕಿಚ್ಚಿನ ಕುರಿತು ಮಾತನಾಡಿದ ಅವರು, ಸಿಎಎ ಸಂವಿಧಾನ ವಿರೋಧಿಯಲ್ಲ. ಈ ಕಾಯ್ದೆಯ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಲೋಕಸಭೆಯಲ್ಲೂ ಚರ್ಚಿಸಲಾಗಿದೆ. ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಸಿಎಎ ಕಾಯ್ದೆಯಿಂದ ನಮ್ಮ ದೇಶದ ಮುಸ್ಲಿಂ ಮತ್ತು ದಲಿತ ಸಮುದಾಯಗಳಿಗೆ ಯಾವುದೇ ತೊಂದರೆ ಇಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬರುವ ವಲಸಿಗರಿಗೆ ಮಾತ್ರ ಸಿಮೀತವಾದದ್ದು ಎಂದು ಹೇಳಿದರು.

ಪೌರತ್ವ ತಿದ್ದುಪಡೆ ಕಾಯ್ದೆಯಿಂದ ಭಾರತ ದೇಶದ ಯಾವುದೇ ಜನಾಂಗಕ್ಕೂ ಎಳ್ಳಷ್ಟು ಸಮಸ್ಯೆಯಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಈ ಕಾಯ್ದೆ ಅನುಷ್ಠಾನ ಮಾಡಲಾಗುತ್ತಿದೆ. ಸಿಎಎ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್​ಸಿ) ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪರ ಮತ್ತು ವಿರೋಧವಾಗಿ ಮಾತನಾಡುವ ಹಕ್ಕು ಪ್ರಜೆಗಳಿಗೆ ಇದೆ. ಪ್ರತಿಭಟನೆ ಹಿಂಸಾತ್ಮಕ ಮಾರ್ಗ ಹಿಡಿಯಬಾರದು, ಶಾಂತಿಯೂತವಾಗಿ ಹೋರಾಟ ಮಾಡಬೇಕು ಎಂದರು.

ದೇಶದ ಜನರು ಪ್ರಚೋದನಾತ್ಮಕ ಹೇಳಿಕೆಗಳಿಗೆ ಕಿವಿ ಕೊಡಬಾರದು. ಶಾಂತಿಯುತವಾಗಿ ಹೋರಾಟ ಮಾಡಬೇಕು. ಭಾರತ ದೇಶದಲ್ಲಿರುವ ಮುಸ್ಲಿಂ, ದಲಿತ ಹಾಗೂ ಇನ್ನಿತರೆ ಯಾವುದೇ ಧರ್ಮಕ್ಕೆ ಸಿಎಎಯಿಂದ ತೊಂದರೆಯಿಲ್ಲ ಎಂದು ತಿಳಿಸಿದರು.

ವಿಶ್ವನಾಥ್‍ಗೆ ಟಾಂಗ್:
ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲ ಮಂತ್ರಿ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಹೇಳಿದ್ದಾರೆ. ಧನುರ್ಮಾಸ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಗೆದ್ದು ಶಾಸಕರಾದ ನಂತರವೇ ಮಂತ್ರಿಯಾಗಬೇಕು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಹುಣಸೂರು ಉಪಚುನಾವಣೆಯಲ್ಲಿ ಎಚ್.ವಿಶ್ವನಾಥ್ ಅವರು ಸೋತಿದ್ದಾರೆ. ಹೀಗಾಗಿ ಗೆದ್ದವರು ಮಾತ್ರ ಮಂತ್ರಿಯಾಗುತ್ತಾರೆ. ಸೋತವರು, ಸತ್ತವರಿಗೆ ಮಂತ್ರಿಗಿರಿ ಇಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *