ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ: ಸೂಲಿಬೆಲೆ ಹೇಳಿಕೆಗೆ ಕರಂದ್ಲಾಜೆ ಟಾಂಗ್

– ವಿಫಲತೆ ಮುಚ್ಚಿಟ್ಟುಕೊಳ್ಳಲು ಮೋದಿ ಕಡೆ ತೋರಿಸ್ತಾರೆ
– ಮಾಜಿ ಸಿಎಂಗೆ ಸಂಸದೆ ಟಾಂಗ್

ನವದೆಹಲಿ: ಯಾರದೋ ಟೀಕೆಗೆ ನಾನು ಉತ್ತರ ಕೊಡುವುದಿಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವೆಲ್ಲ ಗೆದ್ದಿರುವುದು ಹೆಮ್ಮೆಯ ವಿಚಾರ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸಂಸದರ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಟೀಕೆ ವಿಚಾರವಾಗಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರದ ಅಭಿವೃದ್ಧಿ ಕೆಲಸಗಳು ನಮ್ಮೆಲ್ಲರನ್ನೂ ಗೆಲ್ಲಿಸಿದೆ. ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಾದ ಕೆಲಸಕ್ಕಿಂತ ಹೆಚ್ಚು ಬಿಜೆಪಿ 5 ವರ್ಷದಲ್ಲಿ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿಯೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ – ಸೂಲಿಬೆಲೆ

ಹಿಂಜರಿಯುವ, ಅವಮಾನಕ್ಕೆ ಒಳಗಾಗುವ ಅಥವಾ ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ. ಯಾಕೆ ಟೀಕೆ ಮಾಡಿದ್ದಾರೆ ಅಂತ ಮಾಧ್ಯಮದವರು ಚಕ್ರವರ್ತಿ ಸೂಲಿಬೆಲೆ ಅವರನ್ನೇ ಕೇಳಬೇಕು ಎಂದು ಅಸಮಾಧಾನ ಹೊರಹಾಕಿದರು.

ಇದೇ ವೇಳೆ, ಕೆಲಸ ನಮ್ಮದು ವೋಟು ಬಿಜೆಪಿಗೆ ಎಂಬ ಮಾಜಿ ಸಿಎಂ ಹೇಳಿಕೆ ವಿರುದ್ಧ ಗುಡುಗಿದ ಅವರು, ತಮ್ಮ ವಿಫಲತೆ ಮುಚ್ಚಿಟ್ಟುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ತೋರಿಸುತ್ತಿದ್ದಾರೆ. ರಾಜ್ಯದ ಜನರು ಅಭಿವೃದ್ಧಿ ವಿಚಾರಗಳ ಬಗ್ಗೆ ಕೇಳುತ್ತಿದ್ದಾರೆ. ಅವರಿಗೆ ಉತ್ತರ ನೀಡಲಾಗದೆ ಕೇಂದ್ರದ ಕಡೆ ಬೊಟ್ಟು ತೋರಿಸುತ್ತಿದ್ದಾರೆ. ನಿಮಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ. ಪ್ರಧಾನಿ ಮೋದಿ ಅವರಿಗೆ ಕರ್ನಾಟಕದಲ್ಲೂ ಆಡಳಿತ ನಡೆಸುವುದು ಗೊತ್ತು ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *