60 ವರ್ಷಗಳಿಂದ ಮಾಡಿದ ಅನ್ಯಾಯಕ್ಕೆ ಕಾಂಗ್ರೆಸ್ಸಿಗರು ಈಗ ನ್ಯಾಯ ಕೇಳಲು ಹೊರಟಿದ್ದಾರೆ: ಮುನಿಸ್ವಾಮಿ ವ್ಯಂಗ್ಯ

ಕೋಲಾರ : ಈ ದೇಶಕ್ಕೆ 60 ವರ್ಷಗಳಿಂದ ಕಾಂಗ್ರೆಸ್ ನವರು (Congress) ಅನ್ಯಾಯ ಮಾಡಿದ್ದಾರೆ. ಈಗ ನ್ಯಾಯ ಕೇಳಲು ಯಾತ್ರೆ ಮಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ (MP Muniswamy) ಕಾಂಗ್ರೆಸ್ ನ್ಯಾಯ ಯಾತ್ರೆ ಕುರಿತು ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಅನ್ಯಾಯ ಮಾಡಿಕೊಂಡಿದ್ದ ಇವರು ಜನರ ಬಳಿ ಹೋದಷ್ಟು ಇವರು ಮಾಡಿರುವ ಅನ್ಯಾಯವನ್ನ ಜನರೇ ಬಿಚ್ಚಿ ಹೇಳುತ್ತಾರೆ. ಅಲ್ಲದೆ ಇವರಿಗೆ ನ್ಯಾಯ ಎಂದು ಹೇಳುವುದಕ್ಕೆ ಅರ್ಹತೆ ಇಲ್ಲ. ಹೀಗಿರುವಾಗ ಇವರ ನ್ಯಾಯ ಏನು ಎಂದು ಪ್ರಶ್ನೆ ಮಾಡಿದ್ರು.

ಜಮ್ಮು-ಕಾಶ್ಮೀರ, ಚೀನಾ ಸೇರಿದಂತೆ ಎಮೆರ್ಜೆನ್ಸಿ ಸಮಯದಲ್ಲಿ ಏನು ಮಾಡಿದ್ದೀರಿ ಎಂದು ಜನರಿಗೆ ತಿಳಿದಿದೆ. ಜೊತೆಗೆ ಅಯೋಧ್ಯೆ ರಾಮಮಂದಿರ (Ayodhya Ram Mandir) ಕಟ್ಟುವ ವಿಚಾರದಲ್ಲಿ ಡಿ.ಸಿ ಅವರನ್ನ ಹೇಗೆ ನಡೆಸಿಕೊಂಡು ಎತ್ತಂಗಡಿ ಮಾಡಿದ್ರು ಎಂದು ಮರುಪ್ರಶ್ನೆ ಹಾಕಿದರು.

ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್, ಶ್ಯಾಮ್ ಪ್ರಸಾದ್ ಮುಖರ್ಜಿ ಇವರ ಹತ್ಯೆ ಯಾರು ಮಾಡಿದ್ದಾರೆಂದು ಗೊತ್ತಿದೆ. ಇದೆಲ್ಲವನ್ನ ನೋಡಿದಾಗ ಈ ದೇಶಕ್ಕೆ ಕಾಂಗ್ರೆಸ್ ನವರು ಎಷ್ಟು ಅನ್ಯಾಯ ಮಾಡಿದ್ದಾರೆಂದು ತಿಳಿಯುತ್ತದೆ. ನೀವು ಎಷ್ಟೇ ಪಾದ ಯಾತ್ರೆಗಳನ್ನ ಮಾಡಿದ್ರು ನಿಮ್ಮ ಪಾಪದ ಕೊಡ ತುಂಬಿರುವ ಪರಿಣಾಮ ಏನೇ ಮಾಡಿದ್ರೂ ಕಳೆದ ಪಂಚ ರಾಜ್ಯ ಚುನಾವಣೆಗಿಂತಲೂ ಇನ್ನೂ ನೆಲ ಕಚ್ಚುತ್ತೀರಿ ಎಂದು ವಾಗ್ದಾಳಿ ನಡೆಸಿದ್ರು.

ಭಾರತ ದೇಶದಲ್ಲಿ ಎಲ್ಲಾ ಜಾತಿಯ ಜನರು ಕಾಂಗ್ರೆಸ್‌ನ ತಿರಸ್ಕಾರ ಮಾಡಿದ್ದಾರೆ. ಕರ್ನಾಟದಲ್ಲಿ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮೂರೇ ತಿಂಗಳಲ್ಲಿ ಜನ ವಿರೋಧಿ ಸರ್ಕಾರ ಎನಿಸಿಕೊಂಡಿದೆ. ಎಲ್ಲೇ ಹೋದರೂ ಕಾಂಗ್ರೆಸ್ ಪಕ್ಷಕ್ಕೆ ಜನರು ಛೀ.. ಥೂ ಎಂದು ಚೀಮಾರಿ ಹಾಕುತ್ತಿದ್ದಾರೆ ಎಂದು ಹೇಳಿದ್ರು.