ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣು

ಬೆಂಗಳೂರು: ಇಂದು ಸಹ ಸದನದಲ್ಲಿ ಬಿಜೆಪಿ ಶಾಸಕರು ಮೌನಕ್ಕೆ ಶರಣಾಗಲಿದ್ದಾರೆ.

ಇಂದು ಚರ್ಚೆ ಮುಗಿಯುವವರೆಗೂ ಶಾಸಕರು ಸೈಲೆಂಟ್ ಆಗಿರಲು ಸೂಚನೆ ನೀಡಲಾಗಿದೆ. ಇಂದು ಸದನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮತ್ತು ಮಾಧುಸ್ವಾಮಿ ಮಾತ್ರ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರು ನಾಯಕರು ಹೊರತು ಪಡಿಸಿ ಇನ್ನೆಲ್ಲ ಶಾಸಕರು ಇಂದು ಸಹ ಮೌನಕ್ಕೆ ಶರಣಾಗಲಿದ್ದಾರೆ.

ಬಿಜೆಪಿ ಪಾಳೆಯ ಅದೇ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಇಂದು ಸರ್ಕಾರ ಪತನವಾಗುತ್ತೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ. ಸೋಮವಾರವೇ ಸ್ಪೀಕರ್ ಸರ್ಕಾರದ ವಿರುದ್ಧ ಅಲ್ಲಲ್ಲಿ ಚಾಟಿ ಬೀಸಿ ವಿಶ್ವಾಸ ಮತಯಾಚನೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಇಂದು ಸ್ಪೀಕರ್ ತಾವು ನೀಡಿದ್ದ ಮಾತಿಗೆ ತಪ್ಪಲಾರರು ಎನ್ನುವ ಎನ್ನುವ ಭರವಸೆಯಲ್ಲಿ ಇದ್ದಾರೆ.

ಸೋಮವಾರದ ರಾತ್ರಿ 11.30ರ ವೇಳೆಗೆ ಸ್ಪೀಕರ್, ಇಡೀ ರಾಜ್ಯದ ಜನರು ನಮ್ಮ ನಡವಳಿಕೆಗಳನ್ನು ನೋಡುತ್ತಿದ್ದಾರೆ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನಾನು ರಾತ್ರಿ 11 ಗಂಟೆಗೆಯವರೆಗೂ ಇಲ್ಲಿಯೇ ಕೂರುತ್ತೇನೆ. ಯಾರು ಬೇಕಾದರೂ ಚರ್ಚೆ ಮಾಡಿ. ಇವತ್ತೇ ವಿಶ್ವಾಸಮತದ ನಿರ್ಣಯದ ಪ್ರಕ್ರಿಯೆಯನ್ನು ಮುಗಿಸೋಣ ಎಂದು ಹೇಳಿದರು.

ಸಿದ್ದರಾಮಯ್ಯನವರು ಎದ್ದು ನಿಂತು ಮಂಗಳವಾರ ಎಲ್ಲದ್ದಕ್ಕೂ ಅಂತ್ಯ ಹಾಡೋಣ ಎಂದಾಗ ಸ್ಪೀಕರ್ ಎಷ್ಟು ಗಂಟೆಯ ಒಳಗಡೆ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ ರಾತ್ರಿ 8 ಗಂಟೆ ಎಂದಾಗ ಸ್ಪೀಕರ್ ಇಷ್ಟು ಸಮಯ ನೀಡುವುದಿಲ್ಲ. ಸಂಜೆ 4 ಗಂಟೆಗೆ ಚರ್ಚೆ ಮುಗಿಯಬೇಕು ನಂತರ ಸಿಎಂ ಮಾತನಾಡಿ 6 ಗಂಟೆಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿ ಕಲಾಪವನ್ನು ಮುಂದೂಡಿದ್ದರು.

Comments

Leave a Reply

Your email address will not be published. Required fields are marked *