ದೇವೇಗೌಡರನ್ನು ಹೊರಗೆ ಹಾಕಿದ್ದ ಕುಮಾರಸ್ವಾಮಿ – ಸಿಎಂ ವಿರುದ್ಧ ಮಾಧುಸ್ವಾಮಿ ಆರೋಪ

– ಅಪ್ಪನ ಮೇಲೆ ಕಲ್ಲೊಡೆಸಿದ್ರೂ ಊಟ ಹಾಕಿದ್ದು ನಾವು

ತುಮಕೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಮಾಧುಸ್ವಾಮಿ ಗಂಭೀರ ಆರೋಪ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಹಾಕಿದ್ದರು. ಬೆಂಗಳೂರಿನ ವಿದ್ಯಾರ್ಥಿ ಭವನದ ಬಳಿ ಪ್ರಚಾರ ಮಾಡುತ್ತಿದ್ದಾಗ ಕಲ್ಲಿನಿಂದ ಹೊಡೆಸಿದ್ದರು ಎಂದು ಮಾಧುಸ್ವಾಮಿ ಆರೋಪಿಸಿದ್ದಾರೆ.

ವಿಡಿಯೋದಲ್ಲೇನಿದೆ?
ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಕುಮಾರಸ್ವಾಮಿ ಕಲ್ಲಿನಲ್ಲಿ ಹೊಡೆಸಿದ್ದರು. ನಾನು ಎದೆಕೊಟ್ಟೆ. ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು. ನನ್ನ ಮಕ್ಕಳಾದ್ರೂ ಬಂದು ಕಲ್ಲೇಟು ತಿನ್ನುತ್ತಿರಲಿಲ್ಲ. ನೀನು ತಿಂದೆ ಅಂದಿದ್ದರು. ದೇವೇಗೌಡರನ್ನು ಒದ್ದು ಆಚೆಗೆ ಹಾಕಿದ್ದರು. ಉಗ್ರಪ್ಪ, ದೇವೇಗೌಡರ ಬೆನ್ನುಜ್ಜುತ್ತಿದ್ದರು. ಕುಮಾರಸ್ವಾಮಿಯವರು ದೇವೇಗೌಡರನ್ನು ಮನೆಯಿಂದ ಹೊರಗೆ ಅಟ್ಟಿದ್ದರು ಎಂದು ಶಾಸಕರು ವಿಡಿಯೋದಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಕುಮಾರಪಾರ್ಕಿನ ಸಣ್ಣ ಕ್ವಾಟರ್ಸ್ ನಲ್ಲಿ ವಾಸ ಮಾಡುತ್ತಿದ್ದರು. ದೇವೇಗೌಡರನ್ನು ಮನೆಯಲ್ಲಿ ಇಟ್ಟುಕೊಂಡಿರಲಿಲ್ಲ. ಈಗ ಬರಲಿ ಕುಮಾರಸ್ವಾಮಿ ನನ್ನ ಬಳಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಎಂದು ಕೇಳ್ತೀನಿ. ಟಿಫನ್ ಕ್ಯಾರಿಯರ್ ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವೇ ಹೊರತು ಅವರ ಮಕ್ಕಳಲ್ಲ. ಬೆನ್ನು ತಿಕ್ಕಿದ್ದ ಉಗ್ರಪ್ಪ, ಮಾನಸಪುತ್ರ ಬಿ.ಎಲ್ ಶಂಕರ್ ಯಾಕೆ ಆಚೆ ಹೋದರು. ವೈ.ಕೆ ರಾಮಯ್ಯ ಯಾಕೆ ಕಾಂಗ್ರೆಸ್‍ಗೆ ಹೋದರು ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.

ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ ಮಾಧುಸ್ವಾಮಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *