ಬೆಂಗಳೂರು: ಬಜೆಟ್ ಅಧಿವೇಶದ ವೇಳೆ (ಫೆಬ್ರವರಿ 6ರಂದು) ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದ ಬಿಜೆಪಿ ದಿನಾಂಕವನ್ನು ಮುಂದೂಡಿದೆಯಂತೆ. ದಿನಾಂಕ ಬದಲಾಗಿದ್ದರಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜ್ಯಪಾಲ ವಾಜುಬಾಯ್ ವಾಲಾ ಅವರ ಬಜೆಟ್ ಅಧಿವೇಶದ ಭಾಷಣದ ವೇಳೆಯೇ ಅವಿಶ್ವಾಸ ಮಂಡನೆ ಮಾಡಲು ಬಿಜೆಪಿ ಪ್ಲಾನ್ ಮಾಡಿತ್ತು. ಆದರೆ ಈಗ ಅದನ್ನು ಕೈಬಿಟ್ಟು ಫೆಬ್ರವರಿ 15ಕ್ಕೆ ದಿನಾಂಕ ನಿಗದಿ ಮಾಡಿಕೊಂಡಿದೆ. ಅಂದೇ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜ್ಯ ನಾಯಕರು ಮಾಸ್ಟರ್ ಮಾಡಿದ್ದಾರಂತೆ.

ಸಿಎಂ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ ಬಳಿಕ ಫೆಬ್ರವರಿ 15ಕ್ಕೆ ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಪಡೆಯಬೇಕು. ಇದು ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಈ ಸಮಯದ ಸದುಪಯೋಗ ಮಾಡಿಕೊಳ್ಳಲು ಬಿಜೆಪಿಯವರು ಚಿಂತನೆ ನಡೆಸಿದ್ದಾರೆ. ಹೀಗಾಗಿ ಅವಿಶ್ವಾಸದ ಬದಲು ಬಜೆಟ್ ಅನ್ನು ಮತಕ್ಕೆ ಹಾಕುವಂತೆ ಕೇಳಲು ಮುಂದಾಗಿದೆ ಎನ್ನಲಾಗಿದೆ.
ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ವೇಳೆ ಆಡಳಿತ ಪಕ್ಷದ ಅತೃಪ್ತ ಶಾಸಕರ ಮೂಲಕ ಕಗ್ಗಂಟು ಸೃಷ್ಟಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಆಗ ತಲೆ ಎಣಿಕೆ ನಡೆದಲ್ಲಿ ಹಾಜರಿರುವ ಸದಸ್ಯರ ಸಂಖ್ಯಾಬಲದ ಮೇಲೆ ಬಜೆಟ್ ಭವಿಷ್ಯ ನಿರ್ಧಾರವಾಗುತ್ತದೆ. ಸಂಖ್ಯಾ ಬಲ ಸಿಕ್ಕರೆ ಮಾತ್ರ ಬಜೆಟ್ಗೆ ಒಪ್ಪಿಗೆ ಸಿಗುತ್ತದೆ. ಇಲ್ಲವಾದಲ್ಲಿ ಬಿದ್ದು ಹೋಗುವುದು ಖಚಿತ. ಒಂದು ವೇಳೆ ಬಜೆಟ್ ಬಿದ್ದು ಹೋದರೆ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ ಎನ್ನುವುದು ಬಿಜೆಪಿ ನಾಯಕ ಮಾಸ್ಟರ್ ಪ್ಲಾನ್ ಆಗಿದೆ ಎಂದು ಹೇಳಲಾಗುತ್ತಿದೆ.

ಈ ಮಾಸ್ಟರ್ ಪ್ಲಾನ್ನಲ್ಲಿ ಬಿಜೆಪಿ ಗೆಲುವುದು ಅಷ್ಟು ಸುಲಭದ ಮಾತಲ್ಲ. ಈವರೆಗೆ ದೇಶದ ಇತಿಹಾಸದಲ್ಲಿ ಬಜೆಟ್ ಅಂಗೀಕಾರವಾಗದ ಉದಾಹರಣೆಗಳೇ ಇಲ್ಲ. ಹೀಗಾಗಿ ಆಗಲೂ ಬಿಜೆಪಿ ಪ್ಲಾನ್ ಕೈ ತಪ್ಪುವ ಸಾಧ್ಯತೆಗಳಿವೆ ಎನ್ನುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿಶ್ವಾಸಕ್ಕೆ ಕಾರಣವಾಗಿದೆಯಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply