ಎಂಟಿಬಿ, ಬಿಸಿ ಪಾಟೀಲ್ ಪ್ರಳಯವಾದ್ರೂ ಕಾಂಗ್ರೆಸ್‍ಗೆ ಹೋಗಲ್ಲ: ರೇಣುಕಾಚಾರ್ಯ

-ಇಬ್ಬರು ಜೆಡಿಎಸ್ ಶಾಸಕರಿಂದ ಬಿಜೆಪಿಗೆ ಬೆಂಬಲ

ಬೆಂಗಳೂರು: ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಶಾಸಕ ಬಿ.ಸಿ.ಪಾಟೀಲ್ ಪ್ರಳವಾದರೂ ಕಾಂಗ್ರೆಸ್‍ಗೆ ಹೋಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ನಿವಾಸ ಧವಳಗಿರಿಯ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ರೆಬೆಲ್ ಶಾಸಕರ ಧೈರ್ಯವನ್ನು ಮೆಚ್ಚಲೇಬೇಕು. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕರು ಅತೃಪ್ತ ಶಾಸಕರಿಗೆ ಅಧಿಕಾರದ ಆಸೆ ತೋರಿಸಿದರು. ಆದರೆ ಅವರು ಮಾತ್ರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೊಸ ಸರ್ಕಾರ ರಚನೆಯಾಗುವವರೆಗೂ ನಾವು ಬೆಂಗಳೂರಿಗೆ ಮರಳುವುದಿಲ್ಲ ಎಂದು ರೆಬೆಲ್ ಶಾಸಕರು ಹೇಳಿದ್ದಾರೆ. ಅವರೆಲ್ಲರ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಸದನಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗುತ್ತಾರೆ ಅಂತ ಈ ಹಿಂದೆಯೇ ಹೇಳಿದ್ದೆ. ಆ ಮಾತು ಈಗ ಸತ್ಯವಾಯಿತು ಎಂದು ಹೇಳಿದರು.

ಜೆಡಿಎಸ್ ಶಾಸಕರು ಕಾಂಗ್ರೆಸ್ ಸಹವಾಸ ಮಾಡಿ ಹಾಳಾಗಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿತಗೊಳಿಸಬೇಕು ಅಂತ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹೀಗಾಗಿ ಸದನದಲ್ಲಿ ಬಿಜೆಪಿಗೆ ಬ್ಯಾಹ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ಶಾಸಕರೊಬ್ಬರು ನನಗೆ ಫೋನ್ ಮಾಡಿ ತಿಳಿಸಿದ್ದಾರೆ. ಇಬ್ಬರು ಜೆಡಿಎಸ್ ಶಾಸಕರು ಬಾಹ್ಯ ಬೆಂಬಲ ಸೂಚಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಬಾಂಬ್ ಸಿಡಿಸಿದರು.

Comments

Leave a Reply

Your email address will not be published. Required fields are marked *