ಆಂಜನೇಯರನ್ನ ಮಾಜಿ ಸಿಎಂ ತಳ್ಳಿದ್ದನ್ನು ನೋಡಿದ್ರೆ ಅಸ್ಪೃಶ್ಯತೆ ಎದ್ದು ಕಾಣುತ್ತದೆ: ಶ್ರೀರಾಮುಲು

– ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುತ್ತದೆ

ಬಳ್ಳಾರಿ: ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ತಳ್ಳಿದ್ದನ್ನು ನೋಡಿದರೆ ಅಸ್ಪೃಶ್ಯತೆ ಎದ್ದು ಕಾಣುತ್ತದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಶಾಸಕರು, ಚಿತ್ರದುರ್ಗದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕೈ ಹಿಡಿದುಕೊಂಡು ಸಿಎಂ ಕುಮಾರಸ್ವಾಮಿ ಅವರ ಬಳಿಗೆ ಬಂದರು. ಈ ವೇಳೆ ಎಚ್.ಆಂಜನೇಯ ಅವರನ್ನು ಹಿಂದಕ್ಕೆ ತಳ್ಳಿದರು. ಅಹಿಂದ ನಾಯಕ ಅಂತ ಹೇಳಿಕೊಳ್ಳುವ ಸಿದ್ದರಾಮಯ್ಯ ಇಂತಹ ಕೆಲಸ ಮಾಡಬಾರದಿತ್ತು ಎಂದು ಅಸಮಾಧಾನ ಹೊರಹಾಕಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಹಂಕಾರವಿದೆ. ಅವರ ಮುಂದಿನ ದಿನಗಳು ಬಹಳ ಕೆಟ್ಟದ್ದಾಗಿರುತ್ತವೆ. ದೇವರು ಕಣ್ಣು ತೆರೆದರೆ ಇದು ಯಾವುದು ಉಳಿಯುವುದಿಲ್ಲ ಎಂದು ಕಿಡಿಕಾರಿದರು.

ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‍ಗೆ ಲಿಂಗಾಯತರು ನೆನಪಾಗುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಧರ್ಮ ಹಾಗೂ ಜಾತಿ ರಾಜಕಾರಣ ಮಾಡಬಾರದು, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಾವು ತಪ್ಪು ಮಾಡಿದೇವು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇನ್ನೊಂದು ಕಡೆ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು, ನಾವು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಈ ನಾಯಕರ ಹೇಳಿಕೆಯಿಂದ ಜಾತಿ ರಾಜಕಾರಣ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುತ್ತದೆ ಎಂದ ಶಾಸಕರು, ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್ ಕೇಸ್, ಭದ್ರತೆ ವಿಚಾರಕ್ಕೆ ಸಂಭದಿಸಿದ್ದು ಕಾಂಗ್ರೆಸ್ ಸುಮ್ಮನೆ ಆರೋಪ ಮಾಡುತ್ತಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *