ಜೊತೆಗೆ ಅಪಾರ್ಟ್‍ಮೆಂಟಿಗೆ ಬಂದ ಸ್ನೇಹಿತರಿಂದ್ಲೇ ಬಿಜೆಪಿ ಮುಖಂಡ ಕೊಲೆ

– ಮೈಸೂರು ಪೊಲೀಸ್ ಆಯುಕ್ತರ ಶಂಕೆ

ಮೈಸೂರು: ಬಿಜೆಪಿ ಮುಖಂಡ ಆನಂದ್ ಕೊಲೆ ನಡೆದ ಕುವೆಂಪು ನಗರದ ಸರ್ವಿಸ್ ಅಪಾರ್ಟ್‍ಮೆಂಟಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಡಿಸಿಪಿ ಪ್ರಕಾಶ್‍ಗೌಡ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಜಾನೆ 3 ರಿಂದ 4 ಗಂಟೆ ವೇಳೆಯಲ್ಲಿ ಆನಂದ್ ಕೊಲೆಯಾಗಿದೆ. ಬಾಟಲ್‍ಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಗುರುವಾರ ಆನಂದ್ ಹುಟ್ಟುಹಬ್ಬವಿತ್ತು. ಹೀಗಾಗಿ ಆನಂದ್ ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ್ದ. ಮೊದಲು ಬೇರೆಡೆ ಪಾರ್ಟಿ ಮಾಡಿ ನಂತರ ಅಪಾರ್ಟ್‍ಮೆಂಟಿಗೆ ಬಂದಿದ್ದಾರೆ. ಇಲ್ಲಿಯೂ 5 ರಿಂದ 6 ಮಂದಿ ಪಾರ್ಟಿ ಮುಂದುವರೆಸಿದ್ದಾರೆ ಎಂದು ತಿಳಿಸಿದರು.

ಪಾರ್ಟಿ ಮಾಡುವ ವೇಳೆ ಅಲ್ಲಿದ್ದವರಲ್ಲೇ ಗಲಾಟೆ ಆರಂಭವಾಗಿದೆ. ಆಗ ಬಾಟಲ್‍ನಲ್ಲಿ ಚುಚ್ಚಿ ಕೊಲೆ ಮಾಡಿರಬಹುದು. ಪಾರ್ಟಿಯಲ್ಲಿ ಯಾರ್ಯಾರು ಇದ್ದರು ಎಂಬ ಮಾಹಿತಿ ಗೊತ್ತಾಗಿದೆ. ಅವರೆಲ್ಲರನ್ನು ಹಿಡಿದು ವಿಚಾರಣೆ ಮಾಡುತ್ತೇವೆ. ಆದರೆ ಕೊಲೆ ಯಾವ ಕಾರಣಕ್ಕಾಗಿ ಆಗಿದೆ, ಯಾರು ಮಾಡಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಕೊಲೆಯಾದ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *