ದೀಪ ಹಚ್ಚಿ ಅಂದ್ರೆ ಗುಂಡು ಹಾರಿಸಿದ ಬಿಜೆಪಿ ನಾಯಕಿ

ಲಕ್ನೋ: ಪ್ರಧಾನಿ ಮೋದಿ ಅವರು ಎಲ್ಲರೂ ಒಟ್ಟಾಗಿ ಸೇರಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಿ ಎಂದು ನಾಡಿನ ಜನತೆಗೆ ಕರೆ ಕೊಟ್ಟಿದ್ದರು. ಅದರಂತೆಯೇ ಜನರು ದೀಪ ಬೆಳಗಿಸಿದರು. ಆದರೆ ಉತ್ತರ ಪ್ರದೇಶದ ಬಿಜೆಪಿ ನಾಯಕಿಯೊಬ್ಬರು ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಬಲರಾಂಪುರದ ಬಿಜೆಪಿ ಮಹಿಳಾ ಘಟಕದ ಸ್ಥಳೀಯ ನಾಯಕಿಯಾಗಿರುವ ಮಂಜು ತಿವಾರಿ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಷ್ಟೇ ಅಲ್ಲದೇ ಗುಂಡು ಹಾರಿಸಿದ್ದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು, ಅದನ್ನು ಫೇಸ್‍ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿ, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಂಭ್ರಮಾಚರಣೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವುದು ಕಾನೂನುಬಾಹಿರ. ಮಂಜು ತಿವಾರಿ ತಮ್ಮ ಪತಿ ಓಂ ಪ್ರಕಾಶ್ ಅವರ ರಿವಾಲ್ವರ್ ಅನ್ನು ಹಿಡಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಂಜು ತಿವಾರಿ ಮೊದಲು ತಮ್ಮ ಮನೆಯ ಟೆರೆಸ್ ಮೇಲೆ ದೀಪಗಳನ್ನು ಬೆಳಗಿಸಿ ನಂತರ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನು ಪತಿ ಓಂ ಪ್ರಕಾಶ್ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

‘ದೀಪ ಬೆಳಗಿಸೋಣ, ಕೊರೊನಾ ವೈರಸ್ ಓಡಿಸೋಣ’ ಎಂಬ ಕ್ಯಾಪ್ಶನ್ ಕೊಟ್ಟು, ಫೇಸ್‍ಬುಕ್‍ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

ಇದೀಗ ಮಂಜು ತಿವಾರಿ ವಿರುದ್ಧ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಮಂಜು ತಿವಾರಿ ಗುಂಡು ಹಾರಿಸುವುದನ್ನು ಕಾಣಬಹುದು. ಹೀಗಾಗಿ ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ತನಿಖೆ ನಡೆಯುತ್ತಿದೆ” ಎಂದು ಎಸ್‍ಪಿ ಅರವಿಂದ್ ತಿವಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *