ಗುತ್ತಿಗೆದಾರ ಅಂಬಿಕಾಪತಿಯ ಸಾವಿನ ಬಗ್ಗೆ ಕೂಲಂಕುಷ ತನಿಖೆಯಾಗಬೇಕು: ಯತ್ನಾಳ್‌ ಆಗ್ರಹ

ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿಯ (Ambikapathy) ಸಾವಿನ ಬಗ್ಗೆಯೂ ಕೂಲಂಕುಷವಾಗಿ ತನಿಖೆಯಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಆಗ್ರಹಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಬರೆದ ಅವರು, ಆದಾಯ ತೆರಿಗೆ ಇಲಾಖೆಗೆ (Income Tax Department) ಪ್ರಕರಣದ ಕುರಿತು ಹೇಳಿಕೆ ನೀಡಿದ್ದ ಅಂಬಿಕಾಪತಿ ಯಾರ ಹೆಸರುಗಳನ್ನೂ ಹೇಳಿದ್ದಾರೋ, ಆ ಹಣ ಯಾರದ್ದು ಎಂದು ಹೇಳಿದ್ದರೋ ಎಂಬ ಅಂಶವು ತನಿಖೆಯಲ್ಲಿ ಬಯಲಾಗಬೇಕಿದೆ ಎಂದಿದ್ದಾರೆ.  ಇದನ್ನೂ : ಕಾಂಗ್ರೆಸ್ ಆರು ತಿಂಗಳಲ್ಲಿ ನೆಲ ಕಚ್ಚುವ ಪರಿಸ್ಥಿತಿ ತಲುಪಲಿದೆ: ಪ್ರಹ್ಲಾದ್ ಜೋಶಿ

ಗುತ್ತಿಗೆದಾರ ಅಂಬಿಕಾಪತಿ ಸಾವು ಸಹಜವಲ್ಲವೆಂದಿರುವ ಕೆಂಪಣ್ಣನವರ (Kempanna) ಹೇಳಿಕೆಯನ್ನು ಸರ್ಕಾರ ಹಾಗೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಅಂಬಿಕಾಪತಿ ಮನೆಯಲ್ಲಿ 40 ಕೋಟಿ ಹಣ ಆದಾಯ ತೆರಿಗೆ ದಾಳಿಯ ವೇಳೆ ಸಿಕ್ಕಿತ್ತು. ಈ ಹಣ ಸರ್ಕಾರ ಪ್ರಭಾವಿ ಮಂತ್ರಿ ಹಾಗು ಒಬ್ಬ ಪ್ರಭಾವಿ ರಾಜಕಾರಣಿಯ ಮಗನಿಗೆ ಸೇರಿದ್ದು ಎಂಬ ಸುದ್ದಿಯೂ ಇದೆ. ಇದಕ್ಕೆ ಸಾಕ್ಷಿಯಾಗಿ ಆ ಪ್ರಭಾವಿ ರಾಜಕಾರಣಿ ಮಗನ ಆಪ್ತ ಸಹಾಯಕನನ್ನು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಒಳಪಡಿಸಿತ್ತು ಎಂದು ಬರೆದಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನವೆಂಬರ್‌ 27 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಕ್ಟೋಬರ್‌ನಲ್ಲಿ ಅಂಬಿಕಾಪತಿ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಐಟಿ ರೇಡ್ (IT Raid) ವೇಳೆ ಅಂಬಿಕಾಪತಿ ಮನೆಯಲ್ಲಿ ಬರೋಬ್ಬರಿ 44 ಕೊಟಿ ರೂ. ಪತ್ತೆಯಾಗಿತ್ತು.