ನಿಖಿಲ್ ಬದ್ಲು ಎಲ್ಲಿದ್ದೀಯಪ್ಪಾ ಕುಮಾರಣ್ಣ ಎಂದು ಕೇಳುವ ಸ್ಥಿತಿ ಬಂದಿದೆ: ಬಿಜೆಪಿ ಮಾಜಿ ಶಾಸಕ

-ಮಂಡ್ಯ ಜನ ಸಾಕಿದ ಹಸು ಕಥೆ ಹೇಳಿದ ಸುರೇಶ್ ಗೌಡ

ತುಮಕೂರು: ನಿಖಿಲ್ ಎಲ್ಲಿದ್ದೀಯಪ್ಪಾ? ಬದಲು ಎಲ್ಲಿದ್ದೀಯಪ್ಪಾ ಕುಮಾರಣ್ಣ ಎಂದು ಕೇಳುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ ಎಂದು ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಹೊನ್ನುಡುಕೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೇಲೆ ಸ್ತ್ರೀ ಶಕ್ತಿ, ಸಾಲ ಮನ್ನಾ, ಗರ್ಭಿಣಿಯರಿಗೆ 6 ಸಾವಿರ ರೂ, ವೃದ್ಧಾಪ್ಯ ವೇತನ ಹೆಚ್ಚಳ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೂ ಜಾರಿಯಾಗಿಲ್ಲ. ಹಾಗಾಗಿ ನಿಖಿಲ್ ಬದಲು ಎಲ್ಲಿದಿಯಪ್ಪಾ ಕುಮಾರಣ್ಣ ಎಂದು ಕೇಳುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

ಐಸ್‍ಕ್ಯಾಂಡಿ ತಿನ್ನುತ್ತಾ, ಈಜುತ್ತಾ, ಇನ್ನೇನೆನೋ ಮಾಡುವಲ್ಲೂ ಎಲ್ಲಿದಿಯಪ್ಪಾ ನಿಖಿಲ್ ಧ್ಯಾನ ಕೇಳಿ ಬರುತ್ತಿದೆ. ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಿದ್ದ ಕುಮಾರಣ್ಣನ ಕುರಿತು ಮಂಡ್ಯದ ಜನರೇ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದರು.

ಮಂಡ್ಯದ ಜನ ಅಭಿಮಾನದಿಂದ ‘ಜೆಡಿಎಸ್’ ಎಂಬ ಹಸು ಸಾಕಿದ್ದರು. ಕಷ್ಟಪಟ್ಟು ಮೇವು, ಬೂಸಾ ಕೊಟ್ಟು ಬೆಳೆಸಿದ್ದರು. ಆದರೆ ಅದರ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲಾ ದೇವೇಗೌಡರ ಕುಟುಂಬ ತಿನ್ನುತ್ತಿದೆ. ಮಂಡ್ಯ ಜನರಿಗೆ ಸೆಗಣಿ ಕೊಟ್ಟು, ಕೊಟ್ಟಿಗೆ ಕಸ ಗುಡಿಸಲು ದೇವೇಗೌಡರ ಕುಟುಂಬ ಹೇಳುತ್ತಿದೆ. ಹಾಗಾಗಿ ಮಂಡ್ಯ ಜನರು ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಂಡ್ಯ ಜನತೆ ಕುಟುಂಬ ರಾಜಕಾರಣದ ವಿರುದ್ಧ ತಿರುಗಿ ಬಿದ್ದಿದ್ದು, ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿ.ಸುರೇಶ್ ಗೌಡ ಹರಿಹಾಯ್ದರು.

Comments

Leave a Reply

Your email address will not be published. Required fields are marked *