ಬಿಜೆಪಿಯವ್ರು ನಮ್ಮ ಪ್ರಣಾಳಿಕೆ ಕಾಪಿ ಮಾಡಿದ್ದಾರೆ – ಸಿದ್ದರಾಮಯ್ಯ ವ್ಯಂಗ್ಯ

ದಾವಣಗೆರೆ: ಬಿಜೆಪಿಯವರು ನಮ್ಮ ಪ್ರಣಾಳಿಕೆಯನ್ನು ಕಾಪಿ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಸಂತೆಬೆನ್ನೂರಿನಲ್ಲಿ ಹೇಳಿದ್ದಾರೆ.

2008 ರಲ್ಲಿ ಬಿಜೆಪಿ ಪ್ರಣಾಳಿಕೆಯ ಭರವಸೆಯನ್ನು ಪೂರ್ಣಗೊಳಿಸಿರಲಿಲ್ಲ. ನಾವು ಇಂದಿರಾ ಕ್ಯಾಂಟಿನ್ ಆರಂಭ ಮಾಡಿದ್ದೇವೆ. ಅವರು ಹೊಸ ಪ್ರಣಾಳಿಕೆಯಲ್ಲಿ ಅನ್ನಪೂರ್ಣ ಕ್ಯಾಂಟಿನ್ ತೆಗೆಯುತ್ತೇವೆ ಅಂದಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಸಾಲಾ ಮನ್ನಾ ಮಾಡಲಿಲ್ಲ. ಈಗ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಸಹ ಇದೇ ರೀತಿ ಸುಳ್ಳು ಹೇಳುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಏನು ಮಾಡದವರು ಈಗ ಏನು ಮಾಡುತ್ತಾರೆ. ಪ್ರಧಾನಿಯವರೇ ರೈತರ ಸಾಲ ಮನ್ನಾ ಮಾಡಲಿಲ್ಲ. ವೋಟ್ ಗಾಗಿ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.

ಯಡಿಯೂರಪ್ಪ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಬರೀ ಸೈಕಲ್ ಕೂಟ್ವಿ, ಸೀರೆ ಕೊಟ್ವಿ ಅಂತ ಹೇಳುತ್ತಾರೆ. ನಾವು ಕೊಟ್ಟ ಪ್ರಣಾಳಿಕೆಯ 165 ಭರವಸೆಗಳನ್ನು ಪೂರೈಸಿದ್ದೇವೆ. ಇದರ ಬಗ್ಗೆ ಯಡಿಯೂರಪ್ಪ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದರು.

ಕೇಂದ್ರ ಬಿಜೆಪಿ ನಾಯಕರು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೊದಲು ಈಡೇರಿಸಲಿ. ನಮ್ಮ ಸರ್ಕಾರ ಎಲ್ಲರಿಗೂ ರಕ್ಷಣೆ ನೀಡುತ್ತಿದೆ. ಜಿಹಾದ್ ಗೆ ಬೆಂಬಲ ಕೊಡುತ್ತಿಲ್ಲ. ಬಿಜೆಪಿ ನಡೆ ದಲಿತರ ಕಡೆಗೆ ಎಂದು ಹೇಳಿ ನಾಟಕ ಮಾಡುತ್ತಿದ್ದಾರೆ. ಹೋಟೆಲ್ ನಿಂದ ತರಿಸಿದ ಊಟವನ್ನು ದಲಿತರ ಮನೆಯಲ್ಲಿ ತಿನ್ನುತ್ತಾರೆ. ಕಾಂಗ್ರೆಸ್ ಸರ್ಕಾರ ಎಸ್‍ಟಿ, ಎಸ್‍ಸಿ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿಸಿದರು.

ತಮಿಳುನಾಡಿಗೆ ನೀರು ಹರಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲೇ ನೀರಿಗೆ ಸಮಸ್ಯೆ ಇದೆ. ವಾಸ್ತವ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದು ಹೇಳಿದರು.

ನಟ ಸುದೀಪ್ ಹಾಗೂ ನಾನು ಉತ್ತಮ ಸ್ನೇಹಿತರು. ಅವರ ಅಪ್ಪ, ಚಿಕ್ಕಪ್ಪನ ಕಾಲದಿಂದಲೂ ಆತ್ಮೀಯ ಸಂಬಂಧವಿದೆ. ಮೊನ್ನೆ ಅವರ ಜೊತೆ ಮಾತನಾಡುವಾಗ ಒಮ್ಮೆ ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದರು. ರಾಜಕೀಯದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *