ನೆಹರು ಕಾಲದಿಂದ ದೇಶದಲ್ಲಿ ಭ್ರಷ್ಟಾಚಾರ ಆರಂಭ: ರವಿಕುಮಾರ್

ಬೆಂಗಳೂರು: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದಲೇ ಭಾರತದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯ ಲಕ್ಷ್ಯ- 2019 ಕಾರ್ಯಾಗಾರದಲ್ಲಿ ಮಾತನಾಡಿದ ರವಿ ಕುಮಾರ್, ಭ್ರಷ್ಟ ಇತಿಹಾಸ ಕಾಂಗ್ರೆಸ್‍ನಲ್ಲಿ ತುಂಬಿ ತುಳುಕುತ್ತಿದೆ. ಮಾಜಿ ಪ್ರಧಾನಿ ಜವಾಹರಲಾರ್ ನೆಹರು ಅವರ ಕಾಲದಿಂದ ಆರಂಭವಾದ ಭ್ರಷ್ಟಾಚಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದಲೂ ಮುಂದುವರಿಯುತ್ತಿದೆ ಎಂದು ಆರೋಪಿಸಿದರು.

ದೇಶದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನವೂ ರಜೆ ಹಾಕದೇ ಕೆಲಸ ಮಾಡುತ್ತಿದ್ದಾರೆ. ಇತ್ತ ರಾಹುಲ್ ಗಾಂಧಿ ಅವರು ಒಂದು ದಿನ ಪ್ರವಾಸ ಮಾಡಿದರೆ ಎರಡು ದಿನ ವಿದೇಶಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತಾರೆ. ಪಾರ್ಲಿಮೆಂಟ್‍ನಲ್ಲಿ ರಾಹುಲ್ ಗಾಂಧಿ ಕಣ್ಣು ಹೊಡೆಯುತ್ತಾರೆ. ಆದರೆ ಅವರು ಯಾರಿಗೆ ಕಣ್ಣು ಹೊಡೆಯುತ್ತಾರೆ ಅಂತ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ವಿಧಾನಸೌಧದಲ್ಲಿ ಸಿಕ್ಕಿದ್ದ 25 ಲಕ್ಷ ರೂ. ಲಂಚದ ಹಣ ಪುಟ್ಗೋಸಿ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನಾಚಿಕೆ ಇಲ್ಲ. 25 ಲಕ್ಷ ಸಿಕ್ಕಿರೋದಕ್ಕೆ ಪುಟ್ಗೋಸಿ ಅಂತ ಹೇಳುತ್ತೀರಲ್ಲ ಅದು ಭ್ರಷ್ಟಚಾರದ ಹಣ ಅಲ್ವಾ? ಭ್ರಷ್ಟಚಾರಿಗಳನ್ನು ಬಚಾವು ಮಾಡೋಕೆ ದಿನೇಶ್ ಗುಂಡೂರಾವ್ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಸಿದ್ಧತೆಗೆ ಮುಂದಾಗಿರುವ ರಾಜ್ಯ ಬಿಜೆಪಿಯು, ಯುವ ಮತದಾರರನ್ನು ಸೆಳೆಯಲು ವಿಜಯ ಲಕ್ಷ್ಯ ಕಾರ್ಯಾಗಾರ ಹಮ್ಮಿಕೊಂಡಿದೆ. ಈ ಯೋಜನೆ ಅಡಿ ಕೆಲಸ ಮಾಡುತ್ತಿರುವ ಯುವ ಮೋರ್ಚಾ ಕಾರ್ಯಕರ್ತರಿಗೆ ಇಂದು ಕಾರ್ಯಾಗಾರ ನಡೆಸಲಾಯಿತು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ರಾಷ್ಟ್ರೀಯ ಯುವ ಮೋರ್ಚಾ ಉಪಾಧ್ಯಕ್ಷ ಮಧುಕೇಶ್ವರ್ ದೇಸಾಯಿ ಭಾಗವಹಿಸಿದ್ದರು. ಆದರೆ ಕಾರ್ಯಾಗಾರದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ಪ್ರತಾಪ್ ಸಿಂಹ ಅವರ ಗೈರು ಎದ್ದು ಕಾಣಿಸುತ್ತಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *