ಬಿಜೆಪಿ ಕಾರ್ಪೋರೇಟರ್ ಸೇರಿ ಐವರ ಕೊಲೆ

– ಮನೆಯಲ್ಲಿದ್ದ 8 ಮಂದಿಗೆ ಗಾಯ

ಮುಂಬೈ: ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಐವರನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭುಸ್ವಾಲ್ ನಗರದಲ್ಲಿ ನಡೆದಿದೆ. ಐವರಲ್ಲಿ ಕಾರ್ಪೋರೇಟರ್ ಕುಟುಂಬದ ಮೂವರು ಕೊಲೆಯಾಗಿದ್ದು, ಎಂಟು ಜನ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಚಾಕು ಸಹಿತ ನುಗ್ಗಿದ ಮೂವರು ಕೊಲೆಗೈದು ಪರಾರಿಯಾಗಿದ್ದಾರೆ. ಘಟನೆ ನಡೆದ ಗಂಟೆಯೊಳಗೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಿಜೆಪಿ ಕಾರ್ಪೋರೇಟರ್ ರವೀಂದ್ರ  ಖಾರಟ್ ಒಳಗೊಂಡಂತೆ ಇಬ್ಬರು ಮಕ್ಕಳು ಮತ್ತು ಹಿರಿಯ ಸೋದರ ಸುನಿಲ್ (55) ಹಾಗೂ ಓರ್ವ ಗೆಳೆಯ ಕೊಲೆಯಾದ ನತದೃಷ್ಟರು. ಇನ್ನು ಮನೆಯಲ್ಲಿದ್ದ ಎಂಟು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಾರ್ಪೋರೇಟರ್ ಪತ್ನಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಒಟ್ಟು ಐವರು ಸಾವನ್ನಪ್ಪಿದ್ದು, ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಸಂಶಯದ ಮೇಲೆ ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವು ಸಿಕ್ಕಿದ್ದು, ಬಂಧಿತರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂಬುವುದು ಸದ್ಯಕ್ಕೆ ತಿಳಿದು ಬಂದಿದೆ. ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ದ್ವೇಷದಿಂದಲೇ ಕೊಲೆಗಳು ನಡೆದಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ ಎಂದು ಜಲಗಾಂವ್ ಡಿವೈಎಸ್‍ಪಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *