ಬಿಜೆಪಿ ಒಂದು ಕೋಮುವಾದಿ ಪಕ್ಷ, ಜಾತಿ ಹೆಸ್ರಲ್ಲಿ ಮತ ಕೇಳ್ತಾರೆ: ಮಾಜಿ ಸಿಎಂ

ಧಾರವಾಡ: ಬಿಜೆಪಿ ಒಂದು ಕೋಮುವಾದಿ ಪಕ್ಷ, ಜಾತಿ ಹೆಸರಿನಲ್ಲಿ ಮತ ಕೇಳ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಧಾರವಾಡ ಜಿಲ್ಲೆ ನವಲಗುಂದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಐದು ವರ್ಷ ಪ್ರಧಾನಿಯಾಗಿದ್ರು. ಎಲ್ಲಿಯೂ ಕೂಡ ಅವರು ಕರ್ನಾಟಕ ಮತ್ತು ರೈತರ, ಬಡವರ, ದಲಿತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

ಮಹದಾಯಿ ಸಂಬಂಧ ನಾನು ಸಿಎಂ ಆಗಿದ್ದಾಗ ಮೋದಿ ಭೇಟಿಯಾಗೋಕೆ ಹೋಗಿದ್ದೆವು. ಆಗ ಅನಂತ್ ಕುಮಾರ್, ಶೆಟ್ಟರ್, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ನಮ್ಮ ಜೊತೆ ಬರಲಿಲ್ಲ. ಪ್ರತ್ಯೇಕವಾಗಿ ಮೋದಿ ಭೇಟಿಯಾಗಿ ಯಾವ ಕಾರಣಕ್ಕೂ ಒಪ್ಪಿಕೊಳ್ಳಬೇಡಿ ಅಂದಿದ್ದರು ಎಂದು ಆರೋಪಿಸಿದ ಸಿದ್ದರಾಮಯ್ಯ, ಇದೆಲ್ಲವೂ ಸಂಸದ ಪ್ರಹ್ಲಾದ್ ಜೋಶಿಯದ್ದೇ ಕಿತಾಪತಿ ಎಂದು ಹೇಳಿದರು.

ಈ ರೀತಿ ಹೇಳಿ ಎಂದು ಮೋದಿಗೆ ಹೇಳಿಕೊಟ್ಟಿದ್ದರು ಎಂದ ಅವರು, ಮಹದಾಯಿ ವಿಷಯದಲ್ಲಿ ಮೋದಿ ಮಧ್ಯ ಪ್ರವೇಶ ಆಗದೇ ಇರುವುದಕ್ಕೆ ಪ್ರಹ್ಲಾದ್ ಜೋಶಿಯೇ ಕಾರಣ. ಮತ್ತೊಂದು ಸಲ ಸಾಲಮನ್ನಾಕ್ಕಾಗಿ ನಾನು ಬಿಜೆಪಿಯವರನ್ನು ಕರೆದುಕೊಂಡ ಮೋದಿ ಭೇಟಿಗೆ ಹೋಗಿದ್ದೆ. ಬರಗಾಲ ಇದೆ ಸಾಲಮನ್ನಾ ಮಾಡಿ ಎಂದು ಕೈ ಮುಗಿದು ಗೋಗರೆದೆ, ಶೆಟ್ಟರ್, ಜೋಶಿ, ಸದಾನಂದ ಗೌಡರಿಗೆಲ್ಲ ನೀವಾದ್ರೂ ಹೇಳಿ ಅಂದೆ. ಆದರೆ ಈ ಗಿರಾಕಿಗಳು ಸಾಲಮನ್ನಾಗೆ ಒತ್ತಾಯ ಮಾಡಲೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಹ್ಲಾದ್ ಜೋಶಿ ಯಾವತ್ತಾದ್ರೂ ಸಗಣಿ ಎತ್ತಿದ್ದಾರಾ? ಯಡಿಯೂರಪ್ಪ ರೈತ ನಾಯಕ ಎಂದು ಹಸಿರು ಟವೆಲ್ ಹಾಕೋತ್ತಾರೆ. ಆದರೆ ಸಾಲಮನ್ನಾ ಮಾಡ್ರಿ ಅಂದ್ರೆ ನೋಟ್ ಪ್ರಿಂಟ್ ಯಂತ್ರ ಇದೆಯಾ ಅಂದಿದ್ದರು ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದ್ರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಿಎಂ ಇಬ್ರಾಹಿಂ, ಮೋದಿ ನೀನು ಹೋದಿ. ಕೊನೆಗೆ ಆಗುವೆ ನೀನು ಬೂದಿ ಎಂದು ವ್ಯಂಗ್ಯವಾಡಿದ್ರು. ವಿಜಯಪುರ ಕಡೆ ಮೋದಿ ನೀ ಹೋದಿ ಹೋದಿ ಎಂದು ಹೇಳುತ್ತಿದ್ದಾರೆ. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕ್ತಾರಾ ಎಂಬ ಹಾಡನ್ನು ಕೂಡ ಇದೇ ವೇಳೆ ಪ್ರಸ್ತಾಪಿಸಿದ್ರು. ಮೋದಿ ಸತ್ತ ಮೇಲೆ ಯಾರು ಎಂದು ನಾನು ಅಮಿತ್ ಶಾ ಅವರನ್ನು ಕೇಳ ಬಯಸುವೆ. ನಮ್ಮ ಕಡೆ ಮಮತಾ ಹೋದ್ರೆ ಮಯಾವತಿ ಇದ್ದಾರೆ. ಇವರೆಲ್ಲ ಹೋದರೆ ನಮ್ಮ ಕಡೆ ರಾಹುಲ್‍ಗಾಂಧಿ ಇದ್ದಾರೆ. ಆದರೆ ಅಂತಹ ಒಂದು ಪೀಸ್ ಕೂಡ ಬಿಜೆಪಿಯಲ್ಲಿ ಇಲ್ಲ ಎಂದು ಗುಡುಗಿದರು.

Comments

Leave a Reply

Your email address will not be published. Required fields are marked *